ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಡಾ। ಡಿ. ವಿರೇಂದ್ರ ಹೆಗ್ಗಡೆ ಅವರು ನಿನ್ನೆ ಸಂಜೆ ಮಂಗಳೂರಿನ ಸಿನೆಮಾ ಮಂದಿರದಲ್ಲಿ ಕಾಂತಾರ ಕನ್ನಡ ಚಲನಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಿದರು.


ಸಿನೆಮಾ ವೀಕ್ಷಿಸಿದ ಬಳಿಕ ಡಾ। ವೀರೇಂದ್ರ ಹೆಗ್ಗಡೆ ಅವರು ಮಾಧ್ಯಮದವರ ಜತೆ ಮಾತನಾಡಿ, ನಾನು ಸಿನೆಮಾ ನೋಡದೆ ಬಹಳ ದಿನಗಳಾಗಿವೆ. ಕಾಂತಾರ ಸಿನೆಮಾ ಒಂದು ಪ್ರದೇಶದ ನಡೆ-ನುಡಿ, ಸಂಸ್ಕೃತಿ, ಆಚಾರ-ವಿಚಾರಗಳನ್ನೊಳಗೊಂಡು ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರವು ಯುವಕರಿಗೆ ಹೊಸ ಕತೆ ಹಾಗೂ ಹಿಂದಿನ ನಂಬಿಕೆಗಳನ್ನು ನೆನಪಿಸುತ್ತದೆ ಎಂದರು.

ನಟ ಚೇತನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ದೈವಾರಧನೆಯು ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿದೆ. ಇದು ಹಿಂದಿನಿಂದಲೂ ಬಂದ ಸಂಸ್ಕೃತಿ.
ಚೇತನ್ ಅವರು ಹಿಂದೂ ಧರ್ಮದ ಸೂಕ್ಷ್ಮತೆಯನ್ನು ಯಾವ ರೀತಿ ನೋಡಿದ್ದಾರೆ ತಿಳಿದಿಲ್ಲ. ಧರ್ಮದ ಆಚರಣೆಯನ್ನು ವಿಮರ್ಶಿಸುವ ಅಗತ್ಯವಿಲ್ಲ ಎಂದರು.












