ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150 ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಗಾಂಧೀಜಿ ಯವರ ಜೀವನ ಚರಿತ್ರೆ ತಿಳಿಸುವ ಛಾಯಾಚಿತ್ರ ಪ್ರದರ್ಶನವನ್ನು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ರಶ್ಮಿ ಎಸ್.ಆರ್. ಸೋಮವಾರ ಉದ್ಘಾಟಿಸಿದರು.

ವಿದ್ಯಾರ್ಥಿಗಳಿಗೆ ಅಗತ್ಯ: ಗಾಂಧೀಜಿ ಜೀವನದ ಕುರಿತು ಪಠ್ಯಗಳಲ್ಲಿ ನಾವು ಓದಿರುತ್ತೇವೆ. ಆದರೆ ಅವರ ಬದುಕಿನ ವಿವಿಧ ಮಜಲುಗಳನ್ನು ತೋರಿಸುವ ಛಾಯಾಚಿತ್ರಗಳನ್ನು ನೋಡುವ ಅವಕಾಶಗಳು ಕಡಿಮೆ. ಬಂಟ್ವಾಳಕ್ಕೆ ಗಾಂಧೀಜಿ ಬಂದಿದ್ದರು ಎಂಬ ವಿಚಾರಗಳೊಂದಿಗೆ ಹಲವು ರೀತಿಯ ವೈವಿಧ್ಯಮಯ ಸನ್ನಿವೇಶಗಳನ್ನು ಒಟ್ಟಿಗೆ ನೋಡುವ ಅವಕಾಶ ಇಲ್ಲಿದೆ. ಇದನ್ನು ಸದುಪಯೋಗಪಡಿಸಬೇಕು, ಶಾಲಾ ಮಕ್ಕಳು ಇಲ್ಲಿಗೆ ಆಗಮಿಸಿ ಪ್ರದರ್ಶನವನ್ನು ನೋಡಿದರೆ ಮತ್ತಷ್ಟು ಜ್ಞಾನಸಂಪಾದನೆಗೆ ಅವಕಾಶವಾಗುತ್ತದೆ. ಗಾಂಧೀಜಿಯ ಸಂದೇಶಗಳ ಪಾಲನೆಯೂ ಮುಖ್ಯವಾಗಿದೆ ಎಂದು ಈ ಸಂದರ್ಭ ತಹಸೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದರು. ನವೆಂಬರ್ 11 ರಿಂದ 13 ವರೆಗೆ ಬಿ.ಸಿ. ರೋಡ್ ಬಂಟ್ವಾಳ ತಾಲೂಕು ಕಚೇರಿ ಮಿನಿ ವಿಧಾನಸೌಧದಲ್ಲಿ ಪ್ರದರ್ಶನ ನಡೆಯಲಿದ್ದು, ಇದರ ಸದುಪಯೋಗಪಡೆಯುವಂತೆ ಕೋರಿದ ವಾರ್ತಾಧಿಕಾರಿ, ಗಾಂಧೀಜಿ ಅವರ ಬದುಕಿನ ಸಮಗ್ರ ಮಾಹಿತಿಗಳನ್ನೊಳಗೊಂಡ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಇವುಗಳನ್ನು ವೀಕ್ಷಿಸಿ ಅವರ ಬದುಕಿನ ಸಾಧನೆಗಳ ಪರಿಚಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಾರ್ತಾಧಿಕಾರಿ ಖಾದರ್ ಶಾ ತಿಳಿಸಿದರು. ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ, ಉಪತಹಸೀಲ್ದಾರ್ ರೂಪೇಶ್ ಕುಮಾರ್, ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಪಕ್ಕಳ, ಪಾಣೆಮಂಗಳೂರು ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ ಉಪಸ್ಥಿತರಿದ್ದರು.
