ಬಂಟ್ವಾಳ: ರೈತರ ಜಮೀನುಗಳಿಗೆ ಅಕ್ರಮವಾಗಿ ನುಗ್ಗಿ ಸರ್ವೇಗೆ ಮುಂದಾಗುತ್ತಿರುವ ವ್ಯಕ್ತಿಗಳನ್ನು ನಿರ್ಧಾಕ್ಷಿಣ್ಯವಾಗಿ ತಡೆಯಬೇಕು. ಸೂಕ್ತ ಮಾಹಿತಿ ಇಲ್ಲದೆ ಖಾಸಗೀ ಜಮೀನಿಗೆ ನುಗ್ಗಿದರೆ ಪ್ರತಿಭಟನೆ ನಡೆಸುವ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಓಸ್ವಾಲ್ಡ್ ಫರ್ನಾಂಡಿಸ್ ಹೇಳಿದರು.

ಅವರು ಸೊರ್ನಾಡು ಮಿಲ್ಕ್ ಡೈರಿ ಸಭಾಂಗಣದಲ್ಲಿ ಬಂಟ್ವಾಳ ಭಾಗದಲ್ಲಿ 400ಕೆ ವಿ ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದಿಂದ ಜಮೀನು ಕಳೆದುಕೊಳ್ಳುವ ಸಂತ್ರಸ್ತ ರೈತರ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಖಾಸಗೀ ಜಮೀನುಗಳಿಗೆ ಯಾರಿಗೂ ಪ್ರವೇಶವಿಲ್ಲ ಎಂದು ಎಚ್ಚರಿಕೆ ನೀಡಿದರೂ ರೈತರು ತೋಟದಲ್ಲಿ ಇಲ್ಲದ ಸಮಯ ಕಳ್ಳರಂತೆ ತೋಟಗಳಿಗೆ ಆಗಮಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮಾಹಿತಿ ನೀಡುವ ತನಕ ಯಾರೇ ಬಂದರೂ ಅವರನ್ನು ಓಡಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಎಲ್ಲಾ ಪಂಚಾಯಿತಿಗಳಿಗೆ ನಿರಪೇಕ್ಷಣ ಪತ್ರ ನೀಡದಂತೆ ರೈತರಿಂದ ಪತ್ರ ನೀಡುವುದು, ಜಿಲ್ಲಾ ದಂಡಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಯೋಜನೆ ಕೈಬಿಡುವಂತೆ ರೈತರು ವೈಯಕ್ತಿಕವಾಗಿ ಪತ್ರ ಬರೆಯುವ ಬಗ್ಗೆ ನಿರ್ಣಯಕೈಗೊಳ್ಳಲಾಯಿತು.ಈ ಸಭೆಯಲ್ಲಿ ರೈತ ಹೋರಾಟ ಸಮಿತಿಯ ಸಂಯೋಜಕರಾದ ಶ್ರೀಮತಿ ಕೊನ್ಸೆಪ್ಟ ಡೆಸಾ ಮುಂದಿನ ಹೋರಾಟದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅರಳ,ಪಂಜಿಕಲ್ಲು, ಬಿ ಮೂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತ ರೈತರು ಉಪಸ್ಥಿತರಿದ್ದರು
ರೈತ ಹೋರಾಟ ಸಮಿತಿಯ ಅಧ್ಯಕ್ಷರಾದ ರೊಯ್ ಕಾರ್ಲೊ ಸ್ವಾಗತಿಸಿದರು.ಕಾರ್ಯದರ್ಶಿಯಾದ ಶ್ರೀಮತಿ ಬೆನೆಡಿಕ್ಟ ಕಾರ್ಲೊ ವಂದಿಸಿದರು

