ಈಜಿಪ್ಟ್: ಇತ್ತೀಚೆಗೆ ಸುಯೆಝ್ ಕಾಲುವೆಯಲ್ಲಿ ಸಿಕ್ಕಿಹಾಕೊಂಡ ಸರಕು ಸಾಗಣೆಯ ಬೃಹತ್ ‘ಎವರ್ ಗಿವನ್’ ಹಡಗಿನ ಮಾಲಕರಲ್ಲಿ ಸೂಯೆಝ್ ಕಾಲುವೆ ಪ್ರಾಧಿಕಾರ ಸಾವಿರಾರು ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.

900 ಮಿಲಿಯ ಡಾಲರ್ (6,760 ಕೋಟಿ ರೂ.) ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಹಡಗನ್ನು ಬಿಡುಗಡೆ ಮಾಡಲಾಗುವುದಿಲ್ಲ. ಇದಕ್ಕೆ ನ್ಯಾಯಾಲಯದ ಆದೇಶವೂ ಇದೆ ಎಂದು ಸುಯೆಝ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ಹಡಗಿನ ಕಂಪೆನಿಗೆ ಸೂಚಿಸಿದ್ದಾರೆ.
ಜಪಾನ್ ದೇಶದ ‘ಎವರ್ ಗಿವನ್’ ಕಂಪೆನಿಗೆ ಸೇರಿದ 2 ಲಕ್ಷ ಟನ್ ಭಾರದ ಈ ಬೃಹತ್ ಹಡಗು ಕಳೆದ ತಿಂಗಳ 23ರಂದು ಬಿರುಗಾಳಿಗೆ ಸಿಲುಕಿ ಸುಯೆಝ್ ಕಾಲುವೆಯಲ್ಲಿ ಅಡ್ಡಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಈ ಕಾಲುವೆಯಲ್ಲಿ ಪ್ರತಿದಿನ ಯುರೋಪ್ ಮತ್ತು ಏಶ್ಯ ನಡುವೆ ಸಾಗುವ ನೂರಾರು ಹಡಗುಗಳ ಸಂಚಾರ ಸ್ಥಗಿತಗೊಂಡಿತ್ತು. ಒಂದು ವಾರದ ನಿರಂತರ ಪರಿಶ್ರಮದ ಬಳಿಕ ಹಡಗನ್ನು ಕಾಲುವೆಯಿಂದ ತೆರವುಗೊಳಿಸಲಾಯಿತು.
ಕಾಲುವೆಯಲ್ಲಿ ಹಡಗು ಬಾಕಿಯಾದ ಪರಿಣಾಮ ಪ್ರತಿದಿನ ಸುಮಾರು 72,130 ಕೋಟಿ ರೂ. ಮೌಲ್ಯದ ಸರಕು ಸಾಗಣೆ ಬಾಕಿಯಾಗಿತ್ತು. ಅಲ್ಲದೆ ಈ ಅವಧಿಯಲ್ಲಿ, ಕಾಲುವೆಯ ಬಳಕೆಗಾಗಿ ಈಜಿಪ್ಟ್ಗೆ ಪ್ರತಿ ದಿನ ಬರಬೇಕಾಗಿದ್ದ 90ರಿಂದ 113 ಕೋಟಿ ರೂಪಾಯಿ ವರಮಾನವೂ ನಷ್ಟವಾಗಿದೆ.
ಭಾರೀ ಮೊತ್ತದ ಪರಿಹಾರದ ಬಗ್ಗೆ ಈಜಿಪ್ಟ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳಿಸಿ ಹಡಗನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಡಗಿನ ಮಾಲಕರು ಹೇಳಿದ್ದಾಗಿ ವರದಿಯಾಗಿದೆ.

