ಬಂಟ್ವಾಳ: ಕೊರೋನ ಸೋಂಕಿನ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ತಿಂಗಳು ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿರುವ ಸರ್ಕಾರ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಮುಂದಾಗಿರುವುದು ಸರಿಯಲ್ಲ, ಈ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯ ಸ್ಥಳೀಯ ಸರಕಾರವನ್ನೇ ಮುಂದುವರಿಸಬೇಕೆಂದು ಬಂಟ್ವಾಳ ತಾಲೂಕು ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಒತ್ತಾಯಿಸಿದೆ.
ಸುಗ್ರಾಮ ಒಕ್ಕೂಟವು ಗ್ರಾಮ ಪಂಚಾಯತಿ ಚುನಾವಣೆ ನಡೆಯುವವರೆಗೆ ಹೀಗಿರುವ ಪ್ರಸ್ತುತ ಸಮಯದಲ್ಲಿ ನಾವು ಸ್ಥಳೀಯ ಸರಕಾರದ ಅವಿಭಾಜ್ಯ ಅಂಗವಾಗಿ ವಿಕೋಪವನ್ನು ಕೋವಿಡ್-19 ವಿರುದ್ಧ ಸಮರ್ಥವಾಗಿ ನಿಭಾಯಿಸುವಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಉತ್ತರದಾಯಿಯಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಚುನಾಯಿತ ವರ್ಗ ಹಾಗೂ ಅಧಿಕಾರಿ ವರ್ಗದೊಂದಿಗೆ ಒಗ್ಗೂಡಿ ಆಡಳಿತವನ್ನು ನಡೆಸಿದೆ. ಕಳೆದ 50 ದಿನಗಳಿಂದ ಪ್ರತಿ ಪಂಚಾಯತ್ ನಲ್ಲಿ ಸೋಂಕಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ ಬೇರೆ ಕಡೆಯಿಂದ ವಲಸೆ ಬಂದ ಕೂಲಿಕಾರ್ಮಿಕರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡಿ ಮತ್ತು ಅವರಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆಯನ್ನು ತೋರಿದ್ದೇವೆ. ಈ ಸವಾಲಿನ ಸಮಯದಲ್ಲಿ ಪಂಚಾಯಿತಿ ಆಡಳಿತಕ್ಕೆ ಕೇವಲ ಆಡಳಿತ ಅಧಿಕಾರಿಯ ಅಥವಾ ಉಸ್ತುವಾರಿ ಸಮಿತಿಯ ನೇಮಕ ಅಸಮಂಜಸವಾದದ್ದು ಎಂದಿರುವ ಒಕ್ಕೂಟ ಸರ್ಕಾರ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದೆ.


