ಬೆಂಗಳೂರು: ಲೋಕಸಭೆ ಚುನಾವಣೆಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಸಂಸದ ಡಿ.ವಿ ಸದಾನಂದ ಗೌಡ ಅವರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ. ಆದರೆ ಬಿಜೆಪಿ ಶುದ್ಧೀಕರಣ ಅಭಿಯಾನ ಆರಂಭಿಸುತ್ತೇನೆ ಎಂದು ಹೇಳಿದರು.
ಸ್ಫರ್ಧೆ ಮಾಡಿ ಅಂತಾ ನನ್ನ ಆರತಿ ಮಾಡಿ ಕರೆದುಕೊಂಡು ಬಂದು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ. ಚುನಾವಣೆ ಬಳಿಕ ಶುದ್ದೀಕರಣಕ್ಕೆ ವೇಗ ಕೊಡುತ್ತೇನೆ. ಸಮಾನ ಮನಸ್ಕರ ಸಭೆ ಕರೆಯುತ್ತೇನೆ ಎಂದು ಸದಾನಂದಗೌಡ ಹೇಳಿದ್ದಾರೆ. ಪಕ್ಷ ಶುದ್ಧೀಕರಣ ಒಬ್ಬನಿಂದ ಆಗುವ ಕೆಲಸವಲ್ಲ. ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳು. ನಮ್ಮ ಮನೆಯವರಿಗೆ, ಸಂಬಂಧಿಗಳಿಗೆ, ಚೇಲಾಗಳಿಗೆ. ಎಲ್ಲವೂ ನಮಗೇ ಸಿಗಬೇಕು ಎಂದು ಸ್ವಾರ್ಥಿಗಳಾಗಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು
ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನೋವಾಗಿದೆ. ನನಗೆ ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ಸತ್ಯ. ಪಕ್ಷ ಶುದ್ಧೀಕರಣ ನನ್ನ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ. ಮುಂದಿನ ನಡೆ ಏನು ಎಂದು ಹಲವರು ಕೇಳಿದ್ದಾರೆ. ನನ್ನ ಮುಂದಿನ ನಡೆ ಪಕ್ಷ ಶುದ್ಧೀಕರಣ. ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ವಿವಾದ ಆದಾಗ ರಾತ್ರೋ ರಾತ್ರಿ ಅಫಿಡವಿಟ್ ಹಾಕಿಸಿದ್ದು ಬೇರೆ ಲಾ ಮಿನಿಸ್ಟರ್ ಆಲ್ಲ, ಸದಾನಂದ ಗೌಡ. ಇದನ್ನು ನಮ್ಮ ಪಕ್ಷದವರು ತಿಳಿದುಕೊಳ್ಳಬೇಕು ಎಂದು ಅವರು ಆಕ್ರೋಶ ಹೊರಹಾಕಿದರು.
ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ರಾಜ್ಯದಲ್ಲಿ ಬಿಜೆಪಿ ಜನರು ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಮೋದಿ ಹೇಳಿದ ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಮೋದಿ ಹೇಳಿದ ಪರಿವಾರವಾದ ರಹಿತ, ಜಾತಿವಾದ ರಹಿತ ಭ್ರಷ್ಟಾಚಾರ ರಹಿತವಾದ ಪಕ್ಷ ರಾಜ್ಯದಲ್ಲಿ ಇರಬೇಕು. ಇದನ್ನು ಶುದ್ದೀಕರಣಕ್ಕೆ ನಿರಂತರವಾದ ಹೋರಾಟ ನಾನು ಮಾಡುತ್ತೇನೆ ಎಂದರು.
ಮಾಜಿ ಸಿಎಂ, ಮಾಜಿ ಡಿಸಿಎಂ ಚುನಾವಣೆಗೆ ಸ್ಫರ್ಧೆಗೆ ಒತ್ತಾಯ ಮಾಡಿದ ವಿಚಾರವಾಗಿ ಮಾತನಾಡಿದ ಸದಾನಂದಗೌಡ, ಸುಳ್ಳು ಹೇಳುವ ನಾಯಕರು ಬಿಜೆಪಿಗೆ ಆಗಬಾರದು. ಆಡಳಿತ ಮಾಡುವವರು ಸತ್ಯವಂತರಾಗಬೇಕು. ನನ್ನ ಹೆಸರು ಒಂದೇ ಇದ್ದಾಗ ಅದನ್ನು ಕೇಂದ್ರದಲ್ಲಿ ಸಮರ್ಥವಾಗಿ ಮಂಡನೆ ಮಾಡದೇ ಇದ್ದವರು ನಾಯಕರು ಆಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.