ಮುಂಬೈ: ಒಂದು ವೇಳೆ ನೀವು ಕೊರೋನ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರೆ, ಇಲ್ಲವೇ ನಿಮಗೆ ಇನ್ನೂ ಕೊರೋನ ಸೋಂಕು ಪಾಸಿಟಿವ್ ಆಗಿಲ್ಲ ಎಂದರೆ ‘ನಾವೇ ಸೂಪರ್ ಹೀರೋಗಳು’ ಎಂದು ಮೆರೆಯಬೇಡಿರಿ. ಕೊರೋನದಿಂದ ನಮಗೆ ಸ್ವಲ್ಪ ವಿನಾಯಿತಿ ಇದೆ ಎಂದೂ ಭಾವಿಸಬೇಡಿ. ಅನೇಕ ಯುವ ಜನರು ಕೊರೋನ ಸೋಂಕಿಗೆ ಒಳಗಾಗುತ್ತಿರುವುದನ್ನು, ಅದರಿಂದ ಪ್ರಾಣ ಬಿಟ್ಟಿದ್ದನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲದೆ ನಾವು ಅಸಹಾಯಕರಾಗಿದ್ದೇವೆ.


ಇದು ಮುಂಬೈನಲ್ಲಿ ಕೊರೋನ ರೋಗಿಗಳಿಗೆ ನಿರಂತರ ಚಿಕಿತ್ಸೆ ನೀಡುತ್ತಿರುವ ಓರ್ವ ಯುವ ಮಹಿಳಾ ವೈದ್ಯೆ ಡಾ. ತೃಪ್ತಿ ಗಿಲಾಡಾ ಕಣ್ಣೀರಿನ ಮಾತುಗಳು. ಅವರು ಅಸಹಾಯಕತೆಯನ್ನು ಹೇಳಿ ಮಾಡಿರುವ 5 ನಿಮಿಷದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ವೀಡಿಯೋ ಕೊರೋನದಿಂದ ದೇಶದ ಚಿತ್ರಣವನ್ನು ತೆರೆದಿಡುತ್ತಿದೆ.
ಕೊರೋನ ಸೋಂಕಿತರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ ಎಂದರೆ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ, ಔಷಧ, ಲಸಿಕೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ವೈದ್ಯಲೋಕಕ್ಕೆ ಏನೂ ಸಹಾಯ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನ ಈ ಹಿಂದೆ ಎಲ್ಲೂ ಕಂಡಿರಲಿಲ್ಲ. ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ನನ್ನ ಹೃದಯ ಮುರಿದಿದೆ. ದಯವಿಟ್ಟು ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸಿ. ದಯವಿಟ್ಟು ಸುರಕ್ಷಿತವಾಗಿರಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.












