ಉಪ್ಪಿನಂಗಡಿ: ಬೀದಿ ನಾಯಿಯ ದಾಳಿಗೆ ಸಿಲುಕಿ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ಸಂಭವಿಸಿದೆ.


ಸುಮಾರು 6ರಿಂದ 8 ವರ್ಷ ಪ್ರಾಯದ ಗಂಡು ಜಿಂಕೆ ಶನಿವಾರ ನಸುಕಿನ ವೇಳೆ ಬಾರ್ಯ ಅರಣ್ಯದಿಂದ ಮೇಯುತ್ತ ಕಾಡಿನ ಅಂಚಿಗೆ ಬಂದಿದ್ದು, ಬೀದಿನಾಯಿಯೊಂದು ಜಿಂಕೆಯ ಮೇಲೆ ದಾಳಿ ನಡೆಸಿದೆ. ನಾಯಿಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಜಿಂಕೆಯನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸುವಂತೆ ವಿನಂತಿಸಿದ್ದರು.
ಅರಣ್ಯ ಇಲಾಖಾಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ಯುವಷ್ಟರಲ್ಲಿ ಜಿಂಕೆ ಸಾವನ್ನಪ್ಪಿತ್ತು. ಉಪ ಅರಣ್ಯಾಧಿಕಾರಿಗಳಾದ ಸಂದೀಪ್, ಕ್ಯಾರೆಲ್ ಮೊಂತೆರೊ, ಅರಣ್ಯ ವೀಕ್ಷಕ ಪ್ರತಾಪ, ವಾಹನ ಚಾಲಕ ಕಿಶೋರ್ ಮತ್ತು ತಂಡದವರು ಜಿಂಕೆಯ ಮೃತ ದೇಹವನ್ನು ಮಣ್ಣಗುಂಡಿಯಲ್ಲಿರುವ ಅರಣ್ಯ ಇಲಾಖೆಯ ಕೇಂದ್ರೀಯ ನಾಟ ಕೇಂದ್ರದಲ್ಲಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಕಾರ್ಯಪ್ಪ ಉಪಸ್ಥಿತಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.












