ಉಜಿರೆ: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ಸೋಮವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದರು.


ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಸ್ವಾಗತಿಸಿದರು.
ರಾಷ್ಟ್ರೀಯ ವಿಚಾರ ಸಂಕಿರಣ
ಉಜಿರೆ: ಸ್ಥಳೀಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಇದೇ 15 ಮತ್ತು 16 ರಂದು ಸ್ಥೂಲ ಕಾಯದಿಂದ ಬರುವ ಹೃದಯ ಸಂಬಂಧಿ ಹಾಗೂ ಮಧುಮೇಹ ರೋಗಗಳಲ್ಲಿ ಜೀವನ ಶೈಲಿಯ ಪಾತ್ರ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.
ಅವರು ಸೋಮವಾರ ಉಜಿರೆಯಲ್ಲಿರುವ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೇ 15 ರಂದು ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ಸಚಿವ ಯು.ಟಿ. ಖಾದರ್ ವಿಚಾರ ಸಂಕಿರಣವನ್ನು ಉದ್ಘಾಟಿಸುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಆಯುಷ್ ಇಲಾಖೆಯ ಆಯುಕ್ತರಾದ ಮೀನಾಕ್ಷಿ ನೇಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಉಜಿರೆಯ ಕಾಲೇಜನ್ನು ಕೇಂದ್ರ ಸರ್ಕಾವು ಉತ್ಕೃಷ್ಟತಾ ಕೇಂದ್ರವಾಗಿ ಮಾನ್ಯತೆ ನೀಡಿದ್ದು ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದೆ. ವೈದ್ಯಕೀಯ ಶಿಕ್ಷಣ, ಶುಶ್ರೂಷೆ ಹಾಗೂ ಸಂಶೋಧನೆ ಬಗ್ಗೆ ಕಾಲೇಜಿಗೆ ಮೂರು ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಈಗಾಗಲೇ ಖರೀದಿಸಲಾಗಿದೆ.
ಜರ್ಮನಿ ವಿಶ್ವವಿದ್ಯಾಲಯದೊಂದಿಗೆ ಅಧ್ಯಯನ, ವಿನಿಮಯ ಹಾಗೂ ಸಂಶೋಧನೆ ಬಗ್ಯೆ ಒಡಂಬಡಿಕೆ ಮಾಡಿಕೊಂಡಿದ್ದು ಹೆಚ್ಚಿನ ಸಂಶೋಧನೆಗೆ ಅವಕಾಶವಿದೆ ಎಂದು ಅವರು ತಿಳಿಸಿದರು.
ದೇಶದ 35 ವಿಶ್ವವಿದ್ಯಾಲಯಗಳಿಂದ ಒಂದು ಸಾವಿರ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸುವರು ಎಂದು ಡಾ. ಪ್ರಶಾಂತ ಶೆಟ್ಟಿ ತಿಳಿಸಿದರು.
ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ, ಮತ್ತು ಡೀನ್ ಡಾ. ಗೀತ ಶೆಟ್ಟಿ ಹಾಗೂ ಯೋಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.
ಡಿ. ಸುರೇಂದ್ರ ಕುಮಾರ್ರಿಗೆ ಸನ್ಮಾನ
ಉಜಿರೆ: ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಮತ್ತು ಅರಿಪ್ಪಾಡಿ ಮಠದ ಆಶ್ರಯದಲ್ಲಿ ಉಜಿರೆಯಲ್ಲಿ ಇದೇ 17 ರಂದು ಭಾನುವಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಡನೀರು ಮಠದ ಕೇಶವಾನಂದ ಭಾರತೀತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.
ಹಿರಿಯ ಕಲಾಪೋಷಕ ಟಿ. ಶಾಮ್ ಭಟ್, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಶುಭಾಶಂಸನೆ ಮಾಡುವರು.
ಯಕ್ಷಗಾನ ತಾಳ ಮದ್ದಳೆ: ವಿಶಿಷ್ಟ ಪ್ರಯೋಗ:
ಇದೇ 16 ರಂದು ಶನಿವಾರ ಅಪರಾಹ್ನ ನಡೆಯುವ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ತ್ರಿವಿಧ ಪಾತ್ರಾನು ಸಂಧಾನ ಎಂಬ ವಿಶಿಷ್ಟ ಪ್ರಯೋಗ ಅಳವಡಿಸಲಾಗಿದೆ.
ಶ್ರೀ ಕೃಷ್ಣ ಪಾತ್ರದಲ್ಲಿ ವಾಸುದೇವ ರಂಗ ಭಟ್ ಭಾಗವಹಿಸುವರು. ತತ್ವವಾದೀ ಕೌರವನಾಗಿ ಉಮಾಕಾಂತ ಭಟ್, ನೀತಿವಾದೀ ಕೌರವನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಛಲವಾದೀ ಕೌರವನಾಗಿ ಉಜಿರೆ ಅಶೋಕ ಭಟ್ ಭಾಗವಹಿಸುವರು.
ವಿದುರನಾಗಿ ಕೆ. ಸುರೇಶ ಕುದ್ರೆಂತ್ತಾಯ ಪಾತ್ರ ನಿರ್ವಹಿಸುವರು ಎಂದು ಅಶೋಕ ಭಟ್ ತಿಳಿಸಿದರು.
ಕೆ. ಸುಬ್ರಾಯ ಶೆಣೈ, ಬಾಲಕೃಷ್ಣ ಅರಿಪ್ಪಾಡಿತ್ತಾಯ ಮತ್ತು ಮೋಹನ ಶೆಟ್ಟಿಗಾರ್ ಉಪಸ್ಥಿತರಿದ್ದರು.