ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕವಾಗಿ ನಡೆಯುವ ವಿಷು ಮಾಸದ ಜಾತ್ರೆಯನ್ನು ದೇವಪ್ರಶ್ನೆಯ ಮೂಲಕ ಪರಿಶೀಲಿಸಲಾಗಿ ಸಾಂಪ್ರಾದಾಯಿಕವಾಗಿ ನಡೆಯುವ ಶ್ರೀ ಧರ್ಮದೇವತೆಗಳ, ಶ್ರೀ ಅಣ್ಣಪ್ಪ ಸ್ವಾಮಿಯ ನೇಮ – ಕೋಲಗಳು ಮುಂದೆ ಐದು ದಿನಗಳ ಕಾಲ ನಡೆಯಬೇಕಾಗಿದ್ದ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ, ವಿವಿಧ ಕಟ್ಟೆಗಳಿಗೆ ವಿಹಾರ ಇತ್ಯಾದಿಗಳ ಜೊತೆಗೆ ನೇತ್ರಾವತಿ ನದಿಗೆ ಅವಭೃತ ವಿಹಾರ ಮಾಡುವುದನ್ನು ರದ್ದುಪಡಿಸಲಾಗಿದೆ.
ಈ ಸಂದರ್ಭದಲ್ಲಿ ಸದ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಮುಂದೆ ಕೂಡಾ ಪ್ರವೇಶ, ದರ್ಶನವನ್ನು ಮುಂದಿನ ಸೂಚನೆಯ ತನಕ ರದ್ದುಪಡಿಸಲಾಗಿದೆ.
ಈ ಎಲ್ಲವೂ ದೇವಪ್ರಶ್ನೆಯ ಮೂಲಕ ಶ್ರೀ ಸ್ವಾಮಿಯ ಒಪ್ಪಿಗೆ ಪಡೆದು ಪರಿವರ್ತನೆಗೊಂಡಿರುವುದರಿಂದ ಭಕ್ತರು ಯಾವುದೇ ಸಂಕೋಚ ಪಡಬೇಕಾಗಿಲ್ಲ. ಈ ಸಂದರ್ಭದಲ್ಲಿ ಕೊರೋನಾ ಸೋಂಕು ರೋಗ ಮುಕ್ತಿಗಾಗಿ ಪ್ರಾರ್ಥನೆ ಮಾಡುತ್ತಾ ದೈವ ದೇವರುಗಳು ಈ ರೀತಿಯ ಪರಿವರ್ತನೆಗೆ, ಬದಲಾವಣೆಗಳಿಗೆ ಮತ್ತು ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿರುವುದನ್ನು ಪರಿಗಣಿಸಿ ಶ್ರೀ ಕ್ಷೇತ್ರದ ಭಕ್ತರು, ಅಭಿಮಾನಿಗಳು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಮುಂದಿನ ದಿನಗಳ ಸುಭೀಕ್ಷೆಗಾಗಿ ಸರಕಾರದ ಈ ಆದೇಶಗಳನ್ನು ಪರಿಪಾಲಿಸುತ್ತಾ ಸಹಕರಿಸಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


