ಬಂಟ್ವಾಳ: ಕಲಾವಿದರ ಮತ್ತು ಸಾಧಕರ ಜೊತೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ದೀಪಾವಳಿ ಆಚರಣೆ ಮಾಡಿರುವುದು ಯಶಸ್ವಿ ಮತ್ತು ದಾಖಲೆಯ ಕಾರ್ಯಕ್ರಮವಾಗಿದೆ ಎಂದು ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಹೇಳಿದರು.
ಅವರು ಬಿಸಿರೋಡು ಕೈಕಂಬದಲ್ಲಿರುವ ಸೂರ್ಯವಂಶ ಫೌಂಡೇಶನ್ ವತಿಯಿಂದ ಅಧ್ಯಕ್ಷ ಪ್ರೋ.ಡಾ. ಕೆ. ಗೋವರ್ಧನ ರಾವ್ ಅವರ ನೇತೃತ್ವದಲ್ಲಿ ಬಿಸಿರೋಡಿನ ನಗರ ಪೊಲೀಸ್ ಸ್ಟೇಷನ್ ನಲ್ಲಿ ನಡೆದ ವಿಶೇಷ ದೀಪಾವಳಿ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಇಂತಹ ಕಾರ್ಯಕ್ರಮ ಪೊಲೀಸ್ ಇಲಾಖೆಯಲ್ಲಿ ಪ್ರಥಮ. ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿ ನೀಡಿದೆ. ಪೊಲೀಸರೊಂದಿಗೆ ದೀಪಾವಳಿ ಆಚರಣೆ ಉತ್ತಮ ಹಾಗೂ ಇತರರಿಗೆ ಪ್ರೇರಣೆ ನೀಡುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಮಾತನಾಡಿ, ದಿನದ ಇಪ್ಪತ್ತುನಾಲ್ಕು ಗಂಟೆಯೂ ಕೆಲಸದ ಒತ್ತಡದ ಮಧ್ಯೆ ಇರುವ ಪೊಲೀಸರನ್ನು ಗುರುತಿಸಿ ದೀಪಾವಳಿ ಜೊತೆ ಗೌರವಿಸುವ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿ ದೀಪಿಕಾ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಸೀತಾರಾಮ ಭಟ್ ಮಾತನಾಡಿ, ಸಮಾಜಿಮುಖಿ ಕಾರ್ಯಗಳ ಜೊತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಶ್ಲಾಘನೀಯ. ವಿದೇಶದಲ್ಲಿ ದುಡಿದು ಅನೇಕ ಡಾಕ್ಟರೇಟ್ ಪದವಿಗಳನ್ನು ಪಡೆದ ಗೋವರ್ಧನ ಅವರು ವಿದೇಶಿ ಸಂಸ್ಕ್ರತಿಗೆ ಮಾರು ಹೋಗದೆ ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆ ಎಂದರು.
ಅಮೃತಾ ಪ್ರಕಾಶನ ಮಾಸಿಕ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಮಾತನಾಡಿ, ವಿನೂತನ ಹಾಗೂ ಸಮಾಜಿ ಮುಖಿ ಕಾರ್ಯಕ್ರಮ, ಅಜ್ಞಾನ ಹೋಗಲಾಡಿಸಿ ಜ್ಞಾನದ ದೀವಿಗೆಯನ್ನು ಉದಯಿಸಲಿ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಕಲೈಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಡಾ. ಅಶೋಕ್ ಕುಮಾರ್, ಕನ್ನಡ ನಟಿ ಅಕ್ಷತಾ, ಉಮಾ ಗೋವರ್ಧನ ರಾವ್, ಪಜ್ವಲ್ ಗೋವರ್ಧನ ರಾವ್, ಪ್ರತೀಕ್ಷಾ ಗೋವರ್ಧನ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ಎಸ್.ಐ.ಅವಿನಾಶ್, ಪ್ರಸನ್ನ, ಕಲೈಮಾರ್ ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಿಬ್ಬಂದಿ ವಿವೇಕ್ ಸ್ವಾಗತಿಸಿ, ವಂದಿಸಿದರು.

