ವಿಟ್ಲ: ಪತಿ, ಹಾಗೂ ಮಕ್ಕಳಿಂದ ದೂರವಾಗಿ ಅನಾಥವಾಗಿದ್ದ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆಕೆಯ ಮೃತದೇಹ ಕೊಂಡೊಯ್ಯಲು ವಾರೀಸುದಾರರು ಬಾರದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ವಿಟ್ಲದ ಫ್ರೆಂಡ್ಸ್ ತಂಡದ ಸಹಕಾರದಲ್ಲಿ ಅಂತ್ಯಕ್ರಿಯೆ ನಡೆಸಿ, ದಫನ ಮಾಡಲಾಯಿತು.
ಮೂಲತಃ ಬಳ್ಳಾರಿ ಮೂಲದ ಹಾಗೂ ಪ್ರಸ್ತುತ ವಿಟ್ಲ ಸಮೀಪದ ಇಡ್ಕಿದು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಈರಣ್ಣ ಗೌಡ ಅವರ ಪತ್ನಿ ಪಾರ್ವತ್ತಮ್ಮ ಯಾನೆ ಪದ್ಮಾವತಿ ಎಂಬವರನ್ನು ಹಲವು ವರ್ಷಗಳ ಹಿಂದೆ ಪತಿ ಮೂವರು ಗಂಡು ಮಕ್ಕಳ ಸಹಿತ ಬಳ್ಳಾರಿಯಲ್ಲಿ ಕೈ ಬಿಟ್ಟಿದ್ದರು. ೧೯೮೯ರಲ್ಲಿ ಮೂವರು ಗಂಡು ಮಕ್ಕಳಾದ ಈರಣ್ಣ, ಗೋವರ್ಧನ, ಹಾಗೂ ನಾಗರಾಜ್ ಅವರು ಕೂಡ ದೂರವಾಗಿದ್ದರು.
ಬಳಿಕ ಆಕೆ ಹೊಟ್ಟೆಪಾಡಿಗಾಗಿ ಅಲೆದಾಡುತ್ತ ವಿಟ್ಲ ಕಡೆ ಬಂದು ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಕೆ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಮೃತದೇಹವನ್ನು ವಿಟ್ಲ ಶವಗಾರದಲ್ಲಿ ಇಡಲಾಗಿತ್ತು..
ಸಂಬಂಧಿಕರು ವಿಟ್ಲ ಪೊಲೀಸ್ ಠಾಣೆಗೆ ಬಂದು ಮೃತದೇಹ ಕೊಂಡೊಯ್ಯುವಂತೆ ಪೊಲೀಸರು ಪತ್ರಿಕಾ ಪ್ರಕಟನೆ ನೀಡಿದ್ದರು. ಮೂರು ಕಳೆದರೂ ಯಾರೂ ಬಾರದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದ್ದು, ಬಳಿಕ ಫ್ರೆಂಡ್ಸ್ ವಿಟ್ಲ ಸಂಘಟನೆಯ ಮುರಳೀಧರ ವಿಟ್ಲ, ಹೈದರ್ ಅಲಿ ವಿಟ್ಲ ಹಾಗೂ ಇತರ ಸದಸ್ಯರು, ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕರು, ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ದಿನೇಶ್ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿ ದಫನ ಮಾಡಲಾಯಿತು.














