ಮಂಗಳೂರು : ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದ ಪರಿಣಾಮ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಲೂರು ದೇವಾಲಯವೊಂದರಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ14 ಕೋಟಿ ನಷ್ಟವಾಗಿದೆ. ಎಲ್ಲಾ ದೇವಸ್ಥಾನ ಮುಚ್ಚಿದ ಪರಿಣಾಮ ಈ ನಷ್ಟವಾಗಿದ್ದು, ಎ ದರ್ಜೆ ಮತ್ತು ಬಿ ದರ್ಜೆ ದೇವಸ್ಥಾನಗಳಲ್ಲಿ ವಾರ್ಷಿಕ ಶೇಕಡ 35 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿಸಿದರು.
ಲಾಕ್ ಡೌನ್ ಪರಿಣಾಮ ಧಾರ್ಮಿಕ ಸ್ಥಳಗಳು ಮುಚ್ಚಿದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ. ಲಕ್ಷಾಂತರ ಭಕ್ತರು ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆಯ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳುವುದು ಸಾಮಾನ್ಯ. ಇದೇ ಕಾರಣಕ್ಕೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ದೇವಸ್ಥಾನಗಳಿಗೆ ಅತೀ ಹೆಚ್ಚು ಆದಾಯ ತಂದುಕೊಡುತ್ತಿದ್ದ ಸಮಯವಾಗಿತ್ತು. ಆದರೆ ಈ ಬಾರಿ ಮತ್ತು ಇದೇ ಮೊದಲ ಬಾರಿ ಇಷ್ಟು ದೀರ್ಘಕಾಲದ ವರೆಗೆ ರಾಜ್ಯದ ಎಲ್ಲಾ ದೇವಸ್ಥಾಗಳಿಗೂ ಬೀಗ ಬಿದ್ದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


