ಬಂಟ್ವಾಳ: ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಕೊರೊನಾ ಶಂಕಿತ ವ್ಯಕ್ತಿಯ ಗಂಟಲು ದ್ರವದ ವೈರಾಣು ಪರೀಕ್ಷೆಗಾಗಿ ಇಂದು ಬೆಂಗಳೂರಿಗೆ ಕಳುಹಿಸಲಾಗಿದ್ದು, ಅದರ ವರದಿಗೆ 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ದೀಪಾ ತಿಳಿಸಿದ್ದಾರೆ.
ಈತನ ರಕ್ತದ ಮಾದರಿಯನ್ನು ಈಗಾಗಲೇ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪಡೆದಿದ್ದು, ಪರೀಕ್ಷೆಗಾಗಿ ಕಳುಹಿಸಲಾಗಿದೆ, ವರದಿಗಾಗಿ ಕಾಯಲಾಗುತ್ತಿದೆ.

ರಾಜ್ಯದ ಈವರೆಗೆ ಒಟ್ಟು ನಾಲ್ಕು ಕೊರೊನಾ ವೈರಸ್ ಸೊಂಕು ತಗಲಿದ ವ್ಯಕ್ತಿಗಳ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಮೆಕ್ಕಾದಿಂದ ಬಂದ ಒರ್ವ ವ್ಯಕ್ತಿಯನ್ನು ಜ್ವರದ ಹಿನ್ನಲೆಯಲ್ಲಿ ಇಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆದಿತ್ಯವಾರ ದುಬಾಯಿನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಗೆ ಜ್ವರ ಇದ್ದ ಕಾರಣ ಕೊರೊನಾ ಭೀತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು ತಪ್ಪಿಸಿಕೊಂಡಿದ್ದ ಉಳ್ಳಾಲ ಮೂಲದ ವ್ಯಕ್ತಿ ಸೋಮವಾರ ಸಂಜೆ ವಿಟ್ಲದಲ್ಲಿ ಪತ್ತೆಯಾಗಿದ್ದರು.
ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆರಳುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಮುಂದಿನ 48 ಗಂಟೆಗಳ ಕಾಲ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಅದಕ್ಕಾಗಿ ಬಂಟ್ವಾಳ ಆಸ್ಪತ್ರೆಯಲ್ಲಿ ಪ್ರತ್ಯೇಕ ನಾಲ್ಕು ಬೆಡ್ ಗಳ ಐಸೊಲೇಶನ್ ವಾರ್ಡ್ ಮಾಡಲಾಗಿದ್ದು, ಅದರಲ್ಲಿರಿಸಿ ತೀವ್ರ ನಿಗಾ ವಹಿಸಲಾಗುತ್ತದೆ. ಅವರ ಗಂಟಲು ದ್ರವದ ವೈರಾಣು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ಅದರ ವರದಿ 48 ಗಂಟೆಗಳಲ್ಲಿ ಸಿಗಲಿದ್ದು, ಅಲ್ಲಿಯವರೆಗೆ ಬಂಟ್ವಾಳ ಆಸ್ಪತ್ರೆಯಲ್ಲೇ ಇರುತ್ತಾರೆ. ವರದಿಯ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ನಿಗಾ:
ಕೊರೊನೊ ಶಂಕಿತ ವ್ಯಕ್ತಿಯನ್ನು ಹೆಚ್ಚಿನ ನಿಗಾ ವಹಿಸಲಾಗಿದೆ. ಜೊತೆಗೆ ಈತನ ಜೊತೆಯಲ್ಲಿ ಇದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲು ಶುರು ಮಾಡಿದ್ದೇವೆ. ಆದಿತ್ಯವಾರ ಬೆಳಿಗ್ಗೆಯಿಂದ ಈತ ಯಾರ ಜೊತೆಯಲ್ಲಿ ಸಂಪರ್ಕದಲ್ಲಿದ್ದ, ಯಾರ ಮನೆಗೆ ಹೋಗಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯಲು ಶುರು ಮಾಡಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.
ಆತನ ಮನೆ ಹಾಗೂ ಹೆಂಡತಿ ಮನೆಯ ಸದಸ್ಯರ ಮೇಲೆಯೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಹೊರಗಡೆಗೆ ಹೆಚ್ಚು ಹೋಗದಂತೆ ಸೂಚಿಸಲಾಗಿದೆ. ಕೊರೊನೊ ವೈರಸ್ ಶಂಕಿತ ವ್ಯಕ್ತಿಯ ಮನೆಯವರಿಗೆ ಜ್ವರ ಅಥವಾ ಇನ್ನಿತರ ಲಕ್ಷಗಳು ಕಂಡು ಬಂದಲ್ಲಿ ಸ್ಥಳೀಯ ಆರೋಗ್ಯ ಇಲಾಖೆಯನ್ನು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.

