Tuesday, February 11, 2025

ಕಾನೂನು ಶಿಕ್ಷಣ ಕ್ಷೇತ್ರದ ಅಪ್ರತಿಮ ಸಾಧಕಿ ಡಾ| ಶಶಿಕಲಾ ಗುರುಪುರ

ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಗೇರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ
ಮುಂಬಯಿ: ಕರ್ನಾಟಕದ ಕರಾವಳಿಯ ಮಂಗಳೂರು ಗ್ರಾಮಂತರ ಪ್ರದೇಶದ ಗ್ರಾಮೀಣ ಬದುಕಿನೊಂದಿಗೆ ಗುರುಪುರ ಎಂಬ ಪುಟ್ಟ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ಕಾನೂನು ಶಿಕ್ಷಣದಲ್ಲಿ ಉನ್ನತ ಪದವಿ ಗಳಿಸಿರುವ ಡಾ| ಶಶಿಕಲಾ ಗುರುಪುರ ಈ ಬಾರಿ ಕರ್ನಾಟಕ ಸರ್ಕಾರದ 2018-19ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಗಳಿಸಿದ್ದರೆ.

ಮಂಗಳೂರು ಎಸ್‌ಡಿಎಂ ಮತ್ತು ಮೈಸೂರಿನಲ್ಲಿ ಕಾನೂನು ಶಿಕ್ಷಣದಲ್ಲಿ ರ್‍ಯಾಂಕಿನೊಂದಿಗೆ ಉನ್ನತ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಎನ್‌ಎಲ್‌ಎಸ್‌ಐಯು, ಎಸ್‌ಡಿಎಂ ಕಾನೂನು ಕಾಲೇಜು ಮಂಗಳೂರು, ಮಾಹೆ ಮಣಿಪಾಲದ ‘ಮಣಿಪಾಲ ಸಂವಹನ ಸಂಸ್ಥೆ, ಐರ್‍ಲೆಂಡಿನ ಕೋರ್ಕ್ ಕಾಲೇಜ್‌ನಲ್ಲಿ ಕಾನೂನು ಉಪನ್ಯಾಸಕಿ’ ಆಗಿ ಸುಮಾರು 24 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಕಾನೂನು ವಿಷಯದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ದೇಶ ವಿದೇಶ ತಿರುಗಾಡಿದ್ದಾರೆ. ಈಗ ಪುಣೆಯ ಸಿಂಬಯೋಸಿಸ್ ಕಾನೂನು ಕಾಲೇಜ್‌ನ ನಿರ್ದೇಶಕಿ ಹಾಗೂ ಕಾನೂನು ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ಕಾನೂನು, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ, ಮಹಿಳಾವಾದ-ಕಾನೂನು ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿರುವ ಇವರು, ತುಳುನಾಡಿನ ಸಂಸ್ಕೃತಿ ಮತ್ತು ಬದುಕಿನ ಬಗ್ಗೆಯೂ ವಸ್ತುನಿಷ್ಟ ವಾಗ್ಮಿಯಾಗಿದ್ದಾರೆ.

ಡಾ| ಶಶಿಕಲಾ ನ್ಯಾಯಶಾಸ್ತ್ರ, ಮಾಧ್ಯಮ ಕಾನೂನುಗಳು, ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳು, ಶಿಕ್ಷಣ ಮತ್ತು ಅಧ್ಯಯನ ವಿಧಾನಶಾಸ್ತ್ರ, ಮಹಿಳಾ ಕಾನೂನು ಅಧ್ಯಯನ, ಜೈವಿಕತಂತ್ರಜ್ಞಾನ ಕಾನೂನು, ಕಾನೂನು ಮತ್ತು ಸಾಮಾಜಿಕ ರೂಪಾಂತರದಂತಹ ವಿಷಯಗಳ ಬೋಧನೆ ಮತ್ತು ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. 65 ಮಾಸ್ಟರ್ ಮತ್ತು 12 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. 60 ಲೇಖನ ಯಾ ಸಂಶೋಧನಾ ಪೇಪರ್, ಸಹ-ಲೇಖಕರಾಗಿ ಎರಡು ಪುಸ್ತಕ ಮತ್ತು 12 ಇವತ ಪುಸ್ತಕ ಇವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿವೆ.

1991ರಲ್ಲಿ ಭಾರತ ರಾಷ್ಟ್ರೀಯ ಕಾನೂನು ಶಾಲೆಯ ಸಮುದಾಯ ಆಧರಿತ ಪ್ರಶಸ್ತಿ ವಿಜೇತ ಕಾನೂನು ಸುಧಾರಣೆಗಳ ಯೋಜನೆಗೆ ಮಾರ್ಗದರ್ಶಕರಾಗಿದ್ದ ಇವರು, 1999-2004ರವರೆಗೆ ಇಂಗ್ಲೆಂಡಿನ ಡಬ್ಲ್ಯೂಎಸಿಸಿ ಪ್ರಾಯೋಜಕತ್ವದ ಮಹಿಳಾ ಸಂವಹನದ ಏಪ್ಯನ್ ನೆಟ್‌ವರ್ಕಿನಲ್ಲಿ ಸಂಶೋಧನಾ ಪ್ರಾಜೆಕ್ಟ್ ಮತ್ತು ಪ್ರಕಾಶನದ ಸಲಹೆಗಾರರಾಗಿದ್ದರು. 2001ರಲ್ಲಿ ಫೋರ್ಡ್ ಫೌಂಡೇಶನ್ ಆನ್ ಜೆಂಡರ್ ಅಡ್ವಕಸಿಯಡಿ ಎನ್‌ಪಿಎಸ್ ಸೆಕ್ಟರ್ ಸಂಶೋಧನಾ ಅನುದಾನ ಪಡೆದಿದ್ದರು. 2007ರಿಂದ ಕಮ್ಯುನಿಟಿ ಲೀಗಲ್ ಸರ್ವಿಸ್ ಪ್ರಾಜೆಕ್ಟ್ ಅನುದಾನ ದೊಂದಿಗೆ (ಈಗಿನ ಪುಣೆಯ ಎಸ್‌ಎಲ್‌ಎಸ್) ಅನೇಕ ಕಾನೂನು ಮತ್ತು ಸಮುದಾಯ ಆಧರಿತ ಕಾನೂನು ಕ್ಷೇತ್ರದಲ್ಲಿ ಪ್ರಶಸ್ತಿ-ಪುರಸ್ಕಾರ ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡ ಲೆಕ್ಸಿಸ್-ನೆಕ್ಸಿಸ್‌ನ ‘ಭಾರತದ 100 ಮಂದಿ ಕಾನೂನು ಪರಿಣತರ’ ಪಟ್ಟಿಯಲ್ಲಿ ಡಾ. ಶಶಿಕಲಾ ಹೆಸರು ಸೇರಿಕೊಂಡಿದೆ. ಈ ಪಟ್ಟಿಯಲ್ಲಿ ಡಾ| ಎನ್.ಆರ್ ಮಾಧವ ಮೆನನ್, ಇಂದ್ರ ಜೈಸಿಂಗ್, ಅರುಣ್ ಜೇಟ್ಲಿ, ಅಡ್ವಕೇಟ್ ರಾಮ್ ಜೇಠ್ಮಾಲಾನಿ ಮೊದಲಾದವರ ಹೆಸರಿದೆ. ಪುಣೆಯಲ್ಲಿ ಕಾರಾಗೃಹ ಮತ್ತು ಮಹಿಳೆಯರಿಗೆ ಎಸ್‌ಎಲ್‌ಎಸ್ ಸಮುದಾಯ ಕಾನೂನು ಸೇವೆಗೆ ಇವರು ಮಾರ್ಗದರ್ಶಕರಾಗಿದ್ದು, ಈ ಕೆಲಸಕ್ಕೆ 2016ರಲ್ಲಿ ಹರ್ಬರ್ಟ್ ಸ್ಮಿತ್ ಫ್ರೀಹಿಲ್ಸ್ ಅನುದಾನ ಪ್ರಾಪ್ತಿಯಾಗಿತ್ತು.

ಬಿಜಾಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 2003ರಿಂದಲೂ ಸಕ್ರಿಯವಾಗಿರುವ ಇವರು, ಪ್ರಸಕ್ತ ವಿವಿಯ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಮಹಿಳಾ ವೇಶ್ಯೆಯರ ಸ್ಥಿತಿಗತಿ ಅಧ್ಯಯನದ 2017ರ ಡಾ. ಜಯಮಾಲಾ ಸಮಿತಿ ವರದಿಯಲ್ಲಿ ಇವರು ತಜ್ಞ ಸಲಹೆಗಾರರಾಗಿದ್ದರು. ದೇಶದ ಕಾನೂನು ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

2018ರ ನವಂಬರಿನಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿ ವಿಶ್ವಬ್ಯಾಂಕಿನ ಪ್ರಧಾನಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಕಾನೂನು ನ್ಯಾಯ ಮತ್ತು ಅಭಿವೃದ್ಧಿ ಸಪ್ತಾಹದಲ್ಲಿ ಇವರು ಆಹ್ವಾನಿತ ಭಾಷಣಕಾರರಾಗಿದ್ದರು. ಇದೇ ರೀತಿ ಭಾರತದಲ್ಲಿ ಭವಿಷ್ಯದ ಕಾನೂನು ಶಿಕ್ಷಣದ ವಿಷಯದಲ್ಲಿ ಹಾರ್ವರ್ಡ್ ಕಾನೂನು ಸ್ಕೂಲ್ ಸಮಾವೇಶದಲ್ಲಿ ಭಾಷಣ ಮಾಡಿದ್ದರು.

ಮಾಹಿತಿ: ಧನಂಜಯ ಗುರುಪುರ

More from the blog

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...