ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರದ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ಅನುಕೂಲವಾಗುವಂತೆ ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.


2021-22 ನೇ ಸಾಲಿನ ಪಠ್ಯಪುಸ್ತಕ ಮುದ್ರಣ ಸಂಬಂಧ ಕರ್ನಾಟಕ ಪಠ್ಯಪುಸ್ತಕ ಸಂಘವು ಎಲ್ಲ ಶಾಲೆಗಳಿಂದ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು, ಪುಸ್ತಕ ಮುದ್ರಣ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಡೆಂಡರ್ ಪೂರ್ಣಗೊಂಡು ಕಾರ್ಯಾದೇಶ ನೀಡಿದ 100 ದಿನದೊಳಗೆ ಪುಸ್ತಕ ಪೂರೈಕೆಯನ್ನು ಟೆಂಡರ್ ಪಡೆದ ಸಂಸ್ಥೆ ಮುದ್ರಿಸಿ ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ ಒದಗಿಸಲಿದೆ ಎನ್ನಲಾಗಿದೆ.
ಬಳಿಕ ಸಂಘದಿಂದ ಶಾಲೆಗಳಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ತಲುಪಿಸಲಾಗುತ್ತದೆ. ಶಾಲೆಯ ಮುಖ್ಯ ಶಿಕ್ಷಕರು ಅಥವಾ ಮುಖ್ಯಸ್ಥರು ಮಕ್ಕಳ ಪಾಲಕ, ಪೋಷಕರನ್ನು ಕರೆಸಿ, ಪುಸ್ತಕ ವಿತರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.












