ಮಂಗಳೂರು: ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಶನಿವಾರ ಸುರಿದ ಗಾಳಿ ಮಳೆಗೆ ಮೂರು ಗ್ರಾಮಗಳ ೮೬ ಮನೆಗಳಿಗೆ ಹಾನಿಯಾಗಿದ್ದು, ನೂರಾರು ಅಡಿಕೆ ಮರಗಳು ಧರೆಗುರುಳಿವೆ. ಮುಖ್ಯವಾಗಿ ಬಡಗಕಜೆಕಾರು, ಉಳಿ, ಕಾವಳಮೂಡೂರು ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ.


ಉಳಿ ಗ್ರಾಮದ ಗುಂಡಿದೊಟ್ಟು ನಿವಾಸಿ ಲಲಿತಾ ಪೂಜಾರಿ ಅವರ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿಹೋಗಿದೆ. ಇದೇ ಪ್ರವೇಶದ ರುಕ್ಮಿನಿ ಗಂಗಯ್ಯ ನಾಯ್ಕ ಅವರ ಮನೆಯ ಮುಂಭಾಗದ ಮೇಲ್ಛಾವಣಿಯ ಶೀಟುಗಳು ಗಾಳಿಗೆ ಹಾರಿವೆ. ಕಕ್ಯ ಮನೆ ಶೇಖರ ಪೂಜಾರಿ ಅವರ ಮನೆಯ ಹಿಂಭಾಗದ ಶೀಟುಗಳು ಗಾಳಿಗೆ ಹಾರಿವೆ.ಉಳಿ ಗ್ರಾಮದ ಶಿವರಾಮ ದೇವಾಡಿಗ, ಗುಡ್ಡೆಮೇಲು ನಿವಾಸಿ ಸೆಫಿಯ ಹಾಗೂ ಕಕ್ಯಪದವು ನಿವಾಸಿ ಅಮೀನಾ ಅವರ ಮನೆಗೂ ಭಾಗಶಃ ಹಾನಿಯಾಗಿದೆ.
ಉಳಿ ಗ್ರಾಮದ ಬಿತ್ತ ನಿವಾಸಿ ವಿಶ್ವನಾಥ ಸಾಲ್ಯಾನ್ ಅವರ ತೋಟದಲ್ಲಿ ೨೫೦ಕ್ಕೂ ಅಽಕ ಅಡಿಕೆ ಮರಗಳು ಧರೆಗುರುಳಿವೆ. ಬಡಗಕಜೆಕಾರು ಗ್ರಾಮದ ರವಿ ಸಾಲ್ಯಾನ್ ಅವರ ೨೦೦ಕ್ಕೂ ಅಧಿಕ ರಬ್ಬರ್ ಮರಗಳು ಧರೆಗುರುಳಿವೆ. ನರಿಕೊಂಬು ಗ್ರಾಮದ ನಾಯಿಲ ನಳಿನಿ ಅವರ ಮನೆಯ ಆವರಣ ಗೋಡೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಕಾವಳ ಮುಡೂರು ಗ್ರಾಮದ ನೆಲ್ಲಿಗುಡ್ಡೆ, ಅಗರ್ತ್ಯಾರು, ಮುಚ್ಚಿ ರೋಡಿ ಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ ೬೦ ಎಕ್ರೆ ಪ್ರದೇಶದಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ೧೦೦ಕ್ಕೂ ಅಧಿಕ ಅಡಿಕೆ ತೋಟಗಳಲ್ಲಿ ಫಸಲು ಬಿಡುವ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದೆ. ೨೫ಕ್ಕೂ ಅಧಿಕ ವಿದ್ಯುತ್ ಕಂಬಗಳು, ೧೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಪ್ರದೇಶಗಳಿಗೆ ಕಂದಾಯ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕಾವಳಮುಡೂರು ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

