ಬಂಟ್ವಾಳ: ಡಿಜಿಟಲ್ ಮಾಧ್ಯಮದ ವಿಶೇಷ ವರದಿಗೆ ನೀಡಲಾಗುವ ಬಿ.ಜಿ.ಮೋಹನದಾಸ ಪ್ರಶಸ್ತಿಯನ್ನು ನಿರತ ಸಾಹಿತ್ಯ ಸಂಪದ ಆಯೋಜನೆಯಲ್ಲಿ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಪತ್ರಕರ್ತ ಇಮ್ತಿಯಾಜ್ ಶಾ ತುಂಬೆ ಅವರಿಗೆ ಪ್ರದಾನ ಮಾಡಲಾಯಿತು.

ಗಲ್ಫ್ ಕನ್ನಡಿಗ ನಿರತ ಸಾಹಿತ್ಯ ಸಂಪದ ಸಹಯೋಗದೊಂದಿಗೆ ಹಿರಿಯ ಪತ್ರಕರ್ತ ಬಿ.ಜಿ.ಮೋಹನದಾಸ್ ನೆನಪಿಗೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಸರಳ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮಾಧ್ಯಮ ಅಕಾಡೆಮಿಯಿಂದ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಸೇವಾಂಜಲಿ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಮಾತನಾಡಿ, ನಿರತ ಸಾಹಿತ್ಯ ಸಂಪದ ರಚನಾತ್ಮಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ಮಾತನಾಡಿ, ಯುವಕರನ್ನು ಗುರುತಿಸಿ ಪ್ರಶಸ್ತಿ ನೀಡುವುದು ಉತ್ತಮ ಬೆಳವಣಿಗೆ ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಡಿಜಿಟಲ್ ಮಾಧ್ಯಮ ವೇಗದಿಂದ ಬೆಳೆಯುತ್ತಿದ್ದು, ಇದಕ್ಕೊಂದು ಸ್ಪಷ್ಟ ನೀತಿಯನ್ನು ಸರ್ಕಾರ ರೂಪಿಸಿದ ಬಳಿಕ ಸಂಘದ ಸದಸ್ಯತ್ವವನ್ನು ಡಿಜಿಟಲ್ ಪತ್ರಕರ್ತರಿಗೂ ಒದಗಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದರು.
ಬಿ.ಜಿ.ಮೋಹನದಾಸ್ ಅವರ ಬದುಕಿನ ದಾರಿಯನ್ನುಸಹೋದರ ಲಕ್ಷ್ಮೀಕಾಂತ್ ಸ್ಮರಿಸಿದರು.
ಅಧ್ಯಕ್ಷತೆಯನ್ನು ನಿರತ ಸಾಹಿತ್ಯ ಸಂಪದ ಗೌರವಾಧ್ಯಕ್ಷ ವಿ.ಸು.ಭಟ್ ವಹಿಸಿದ್ದು, 25 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ನಿರತ ವತಿಯಿಂದ ಹಲವು ಸಾಹಿತ್ಯಿಕ ಚಟುವಟಿಕೆಗಳನ್ನು ಆಯೋಜಿಸಿರುವುದಾಗಿ ಹೇಳಿದರು.
ಹಿರಿಯ ಪತ್ರಕರ್ತ, ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಜಿ.ಮೋಹನದಾಸ್ ಪತ್ನಿಯಶೋಧ, ಪುತ್ರಿ ಯಶಸ್ವಿ, ಸಹೋದರಿ ಮೀನಾಕ್ಷಿ ಉಪಸ್ಥಿತರಿದ್ದರು. ಇದೇ ವೇಳೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೆ.ಕೆ.ಪೂಂಜಾ ಅವರಿಗೆ ದಣಿವರಿಯದ ಕರ್ಮಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬೃಜೇಶ್ ಅಂಚನ್ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು. ಬಿ.ಎಂ. ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
