ಬಂಟ್ವಾಳ: ಪಾದಚಾರಿ ಮಹಿಳೆಯೋರ್ವಳು ರಸ್ತೆ ದಾಟುವ ವೇಳೆ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ನರಿಕೊಂಬು ನಿವಾಸಿ ಸರೋಜಿನಿ (58) ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಸರೋಜಿನಿ ಅವರು ಕೆಲಸ ಮುಗಿಸಿ ಮನೆಗೆ ಹೊರಟು ಹೋಗುವ ವೇಳೆ ಪಾಣೆಮಂಗಳೂರು ಮಾಂಡೋವಿ ಮೋಟಾರು ಶೋ ರೂಮ್ ನ ಎದುರುಗಡೆ ರಸ್ತೆಯನ್ನು ದಾಟುವ ವೇಳೆ ಕೆ.ಎಸ್.ಆರ್.ಟಿ.ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಸರೋಜಿನಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ರಸ್ತೆಯಲ್ಲಿದ್ದರು. ಆ ವೇಳೆ ಆಸ್ಪತ್ರೆಗೆ ದಾಖಲು ಮಾಡಲು ಯಾವುದೇ ವಾಹನ ಸಿಗದೆ ಇದ್ದ ಕಾರಣ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ. ಅವರು ಕೂಡಲೇ ಕಚೇರಿ ವಾಹನದಲ್ಲಿ ಹಾಕಿಕೊಂಡು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತಲೆಗೆ ಗಂಭೀರ ಪ್ರಮಾಣದ ಗಾಯವಾದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ .


