Saturday, January 31, 2026

ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೋವಿಡ್ ನಿಗ್ರಹದಲ್ಲಿ ತೊಡಗಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ

ಬಂಟ್ವಾಳ : ತಾಲೂಕಿನ ಕೋರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸೌಕರ್ಯ ತಾಲೂಕಿನಲ್ಲೇ ಇದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಇದು ಭಯಾನಕ ರೋಗದ ವಿರುದ್ಧದ ಯುದ್ಧದ ಸಮಯ, ಮತ್ತೊಬ್ಬರನ್ನು ನಿಂದಿಸುವ ಹೊತ್ತಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಬ್ದಾರಿಯನ್ನು ಅರಿತು ಕೋವಿಡ್ ನಿಗ್ರಹದಲ್ಲಿ ತೊಡಗಿಸಿಕೊಳ್ಳಿ.. ಇದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಅಧಿಕಾರಿಗಳಿಗೆ ನೀಡಿದ‌ ಕಿವಿಮಾತು.

ಶನಿವಾರ ಬೆಳಿಗ್ಗೆ ಬಿ.ಸಿ.ರೋಡಿನ ಎಸ್ಎ ಎಸ್ ಆರ್ ವೈ ಸಭಾಂಗಣದಲ್ಲಿ  ಕೋವಿಡ್ -19 ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಕುರಿತಾಗಿ ಅವಲೋಕನ ನಡೆಸಿದರು. ಬಂಟ್ವಾಳ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ 8 ವೆಂಟಿಲೇಟರ್ ಗಳ ಪೈಕಿ ಮೂರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಒದಗಿಸಿ, ಎರಡು ಹೆಚ್ಚುವರಿಯಾಗಿ ಒದಗಿಸಿ ತಾಲೂಕಿನಲ್ಲಿಯೇ ಅಗತ್ಯದ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಅನಗತ್ಯವಾಗಿ ವೆನ್ ಲಾಕ್ ಗೆ ಕಳುಹಿಸುವುದು ಬೇಡ ಎಂದು‌ ನಿರ್ದೇಶನ ನೀಡಿದರು. ಆಕ್ಸಿಜನ್ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ‌ಸೂಚಿಸಿದ ಅವರು, ಎಂಸಿಎಫ್ ಘಟಕದ ಕೆಲಸಕ್ಕೆ ಜಿಲ್ಲಾಡಳಿತ ಅಗತ್ಯ ನೆರವು ನೀಡುವುದಾಗಿ ಅವರು ತಿಳಿಸಿದರು.

ಕೋವಿಡ್ ವೈದ್ಯಕೀಯ‌ ವ್ಯವಸ್ಥೆಗೆ ಹಣಕಾಸಿನ ಕೊರತೆ ಯಿಲ್ಲ.

ತಾಲೂಕು ಆಡಳಿತದ ನಿಧಿಯಲ್ಲೂ ಕೋವಿಡ್ ಸಂಬಂಧಿ ಅಗತ್ಯದ ವೈದ್ಯಕೀಯ ಸಲಕರಣೆ ಖರೀದಿಗೆ ಅನುದಾನವಿದ್ದು, ಜಿಲ್ಲಾಡಳಿತದಲ್ಲಿಯೂ 15 ಕೋಟಿ ಅನುದಾನವಿದೆ. ಅಗತ್ಯ ವ್ಯವಸ್ಥೆಗೆ ಬಳಸಿಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ರೆಂಡಿಸೀವರ್ ಚುಚ್ಚುಮದ್ದನ್ನು ಅಗತ್ಯವಿದ್ದರೆ ಮಾತ್ರ ನೀಡಿ ಎಂದ‌ ಅವರು, ಕೋವಿಡ್ ಲಕ್ಷಣ ವುಳ್ಳವರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಮಾತ್ರ ನಿಯಮಾನುಸಾರ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಿದ ಅವರು, ಕೋವಿಡ್ ನಿಂದ ಮೃತರಾದವರ ಅಂತಿಮ ಸಂಸ್ಕಾರವನ್ನು ಸರ್ಕಾರದ ಕಡೆಯಿಂದ ಉಚಿತವಾಗಿ‌ ನಡೆಸಲು ನಿರ್ದೇಶನ ಬಂದಿದ್ದು, ಇದಕ್ಕಾಗಿ ಮುತುವರ್ಜಿ ವಹಿಸುವಂತೆ‌ ಸೂಚಿಸಿದರು. ರೋಗಿಗಳನ್ನು‌ ಆಸ್ಪತ್ರೆಗೆ ಸಾಗಿಸಲು ಸರ್ಕಾರಿ ಆಸ್ಪತ್ರೆಗಳ ಅಂಬ್ಯುಲೆನ್ಸ್ ಗಳ ಜೊತೆಯಲ್ಲಿ ‌ಖಾಸಗಿ ಅಂಬ್ಯುಲೆನ್ಸ್ ಗಳನ್ನು ಉಚಿತ ಸೇವೆ ನೀಡಲು ಬಳಸಬೇಕು. ಪ್ರಾಥಮಿಕ‌ ಸಂಪರ್ಕಿತರನ್ನು ಆಸ್ಪತ್ರೆಗೆ ಸಾಗಿಸಲು ಕೂಡ‌ಸಂಚಾರಿ ದಳಗಳನ್ನು ಬಳಸುವಂತೆ ಸಲಹೆ‌ ನೀಡಿದರು.

ಗ್ರಾ.ಪಂ.ಟಾಸ್ಕ್‌ಫೋರ್ಸ್ ಬಲಗೊಳ್ಳಲಿ 

ಪ್ರತೀ ಗ್ರಾಮಪಂಚಾಯತ್ ಗಳಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಮುತುವರ್ಜಿಯಿಂದ ಕೆಲಸ‌ಮಾಡಿದಾಗ, ಕೊರೋನಾ ನಿಗ್ರಹ ಸುಲಭ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಈ ಕುರಿತಾಗಿ ವಿವರಣೆ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಸರ್ಕಾರದ ಸುತ್ತೋಲೆಯಂತೆ ಪ್ರತೀ ಗ್ರಾ.ಪಂ.ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ‌ರಚಿಸಲಾಗಿದ್ದು, ಇದನ್ನು ಸಮರ್ಪಕವಾಗಿ ಮುನ್ನಡೆಸಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್‌ಉಳಿಪ್ಪಾಡಿ ಯವರು, ಟಾಸ್ಕ್ ಫೋರ್ಸ್ ಸಮಿತಿ‌ ಕುರಿತಾದ ಮಾಹಿತಿ ಕಳೆದ ಬಾರಿಯಷ್ಟು ಈ ಬಾರಿ ಅಧಿಕಾರಿ ವರ್ಗ ದಿಂದ ‌ಸಿಕ್ಕಿಲ್ಲ ಎಂದರು.‌ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಈ ಕುರಿತಾದ ವಿವರವನ್ನು ನೀಡುವುದರ ಜೊತೆಗೆ ಗ್ರಾಮಮಟ್ಟದಲ್ಲಿ ಈ ಸಮಿತಿಯನ್ನು ಬಲಗೊಳಿಸುವಂತೆ ಇಓ ರವರಿಗೆ ಸೂಚಿಸಿದರು. ಕೋವಿಡ್ ಸೋಂಕಿತರಿರುವ ಮನೆ, ಪರಿಸರವನ್ನು ಮೈಕ್ರೋ ಕಂಟೋನ್ಮೆಂಟ್ ಪ್ರದೇಶಗಳಾಗಿ ಗುರುತಿಸಿ, ‌ಆ ಮನೆಮಂದಿ‌ಹೊರಗೆ ಬಾರದಂತೆ, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯ ಗ್ರಾ.ಪಂ‌.ನ ಟಾಸ್ಕ್ ಫೋರ್ಸ್ ಸಮಿತಿ ಮೂಲಕ‌ ಒದಗಿಸುವಂತೆ ಎಂದು ಸಲಹೆ ನೀಡಿದರು

ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚುವುದು ಬಹುಮುಖ್ಯ ಕೆಲಸವಾಗಿದ್ದು , ಈ ಕೆಲಸಕ್ಕೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರಯರನ್ನೂ ಬಳಸಿಕೊಳ್ಳಬಹುದಾಗಿದೆ, ಸಹಕಾರ ನೀಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ‌ ಅವರು, ಅತ್ಯಂತ ಕಡಿಮೆ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿದ ಪೂಂಜಾಲಕಟ್ಟೆ ಹಾಗೂ ಪಂಜಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರ ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಫರಂಗಿಪೇಟೆಯಲ್ಲಿ ಲಾಕ್ ಡೌನ್ ಉಲ್ಲಂಘನೆಯ ಬಗ್ಗೆ ದೂರುಗಳು ಬರುತ್ತಿದೆ, ಅಲ್ಲದೆ ಸೋಂಕಿತರು ಅಥವಾ ಪ್ರಾಥಮಿಕ ಸಂಪರ್ಕಿತರು ಸುತ್ತಾಟ ನಡೆಸುವುದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದರು.

ಪುರಸಭೆ ವಿಶೇಷ ಸಭೆ ನಡೆಸಬೇಕು: ಕೋಟ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೋವಿಡ್ ಪ್ರಕರಣ ಹಾಗೂ ಅವುಗಳ‌ನಿಯಂತ್ರಣ ಕುರಿತಾಗಿ ಅಧಿಕಾರಿಗಳು-ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ‌ಮಾಡಬೇಕು, ತಕ್ಷಣವೇ ವಿಶೇಷ ಸಭೆ ನಡೆಸುವ ಮೂಲಕ ಸಮಸ್ಯೆಗಳ ನ್ನು ಬಗೆಹರಿಸಬೇಕೆಂದು ಸಲಹೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಬೆಂಗಳೂರು ಹಾಗೂ ಇತರೆಡೆಗಳಿಂದ ಬಂದವರನ್ನು ಅವರವರ ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಬೇಕು, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೆ ಒಳಪಡಿಸಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾಪ್ರಭು ಮಾಹಿತಿ ನೀಡಿ, ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ 542 ಸಕ್ರೀಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ ಹೊರ ತಾಲೂಕಿನ 93 ಪ್ರಕರಣಗಳೂ ಇವೆ. ತಾಲೂಕಿನ 391 ಮಂದಿ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ, 12 ಮಂದಿ ಸರ್ಕಾರಿ ಆಸ್ಪತ್ರೆ ಹಾಗೂ 34 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರಾ ಗ್ರಾಮದ‌ ಒಂದು ಮನೆಯ ಐದುಮಂದಿಯಲ್ಲಿ ಹಾಗೂ ಬಿಕಸ್ಬಾ ಗ್ರಾಮದ ಪಲ್ಲಮಜಲು‌ವಿನ ಒಂದೇ ಮನೆಯ 7 ಮಂದಿಯಲ್ಲಿ‌ಕೋವಿಡ್ ಫಾಸಿಟಿವ್ ಬಂದಿದ್ದು, ಕಂಟೋನ್ ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ ಎಂದು ವಿವರ ನೀಡಿದರು. ಕೋವಿಡ್ ನಿಯಂತ್ರಣಕ್ಕೆ‌ಪೂರಕವಾಗಿ ತಾಲೂಕಿನ ತುಂಬೆ ಫಾದರ್ ಮುಲ್ಲರ್ಸ್, ಬಿಸಿರೋಡಿನ‌ಸೋಮಯಾಜಿ ಆಸ್ಪತ್ರೆ ‌ಹಾಗೂ ಪರ್ಲಿಯ ಆಸ್ಪತ್ರೆಯ ನೆರವು ಪಡೆದುಕೊಳ್ಳಲಾಗಿದ್ದು, ಕೋವಿಡ್ ಪ್ರಕರಣಗಳಿಗೆ ಬೆಡ್  ಗಳ್ನ್ನು ಕಾಯ್ದಿರಿಸಲಾಗಿದೆ ಎಂದು‌ ವಿವರಿಸಿದರು.

ತಾ.ಪಂ‌.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಅಧ್ಯಕ್ಷ ಮಹಮ್ಮದ್‌ಶರೀಫ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವರ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಇಓ ರಾಜಣ್ಣ ಮೊದಲಾದವರು ‌ಉಪಸ್ಥಿತರಿದ್ದರು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...