ಬಂಟ್ವಾಳ: ಕುಟುಂಬ ಸದಸ್ಯೆಯ ಅಂತ್ಯಸಂಸ್ಕಾರದ ಕಾರ್ಯ ಮಾಡಿದಷ್ಟು ಹೃದಯ ಭಾರವಾಗಿದೆ. ಕುಟುಂಬದ ಸದಸ್ಯರು ಅಂತಿಮ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಸಾಧ್ಯವಿಲ್ಲದ ಸಂಕಷ್ಟದ ಸ್ಥಿತಿಯಲ್ಲಿ ನಾವೆಲ್ಲಾ ಮುಂದೆ ನಿಂತು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಉತ್ತಮ ರೀತಿಯಲ್ಲಿ ಮಾಡಿದ್ದೇವೆ ಎಂದು ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಅಧಿಕಾರಿಗಳು ಭಾವುಕರಾಗಿ ಹೇಳಿದರು.
ಜಿಲ್ಲಾಡಳಿತ ಅದೇಶದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನುರಿತ ಸಿಬ್ಬಂದಿಗಳು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಉತ್ತಮ ರೀತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಜನರಿಗೆ ಸರಿಯಾದ ಮಾಹಿತಿ ಕೊರತೆಯಿಂದಾಗಿ ಕೊರೊನಾದಿಂದ ಮೃತಪಟ್ಟ ಈ ವೃದ್ದೆಯ ಶವಸಂಸ್ಕಾರಕ್ಕೆ ಜಿಲ್ಲೆಯಲ್ಲಿ ವಿರೋಧಗಳು ವ್ಯಕ್ತವಾದಾಗ ಒಂದಷ್ಟು ಗೊಂದಲಗಳು ಉಂಟಾಗಿತ್ತು. ಮಹಿಳೆಯ ಸ್ವಂತ ಊರು ಬಂಟ್ವಾಳದಲ್ಲೂ ಅಂತ್ಯಸಂಸ್ಕಾರಕ್ಕೆ ವಿರೋಧಗಳು ಕೇಳಿ ಬಂದಾಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತನ್ನ ಸ್ವಂತ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಎಂದು ಹೇಳಿದ್ದರು.
ಆದರೆ ಬಳಿಕ ಜಿಲ್ಲಾಡಳಿತ ಜನನಿಬಿಡ ಪ್ರದೇಶದಲ್ಲಿ ಸಂಸ್ಕಾರಕ್ಕೆ ಮುಂದಾಗಿ ಕೈಕುಂಜೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇಲ್ಲೂ ಕೂಡ ಸ್ವಲ್ಪ ಮಟ್ಟಿಗೆ ಗೊಂದಲಗಳು ಉಂಟಾದಾಗ ಸ್ವತಃ ಪೋಲೀಸರು ಜನರ ಮನವೊಲಿಸಲು ಮುಂದಾಗಿ ಯಶಸ್ವಿಯಾದರು.

ಕಟ್ಟಿಗೆ ತುಪ್ಪ ತಂದರು
ಜಿಲ್ಲಾಡಳಿತದ ಆದೇಶದಂತೆ ಒಂದೆಡೆ ಜನರ ಮನವೊಲಿಸುವ ಕೆಲಸ ಇನ್ನೊಂದು ಕಡೆ W.H.O.ದ ನಿಯಮಗಳಿಗೆ ಅನುಸಾರವಾಗಿ ಹಿಂದೂ ಸಂಸ್ಕೃತಿಯ ಪ್ರಕಾರ ಈ ವೃದ್ದೆಯ ಶವಸಂಸ್ಕಾರಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಆ ಮಧ್ಯ ರಾತ್ರಿಯಲ್ಲಿಯೂ ಶವಸಂಸ್ಕಾರಕ್ಕೆ ಕಟ್ಟಿಗೆ ಹೊಂದಿಸಿಕೊಡುವ ಕೆಲಸ, ತುಪ್ಪ ತಂದುಕೊಡುವ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಒಂದು ಸಲಾಂ ನೀಡಲೇಬೇಕು.
ಸತ್ತ ವ್ಯಕ್ತಿಗೂ ಅಷ್ಟೇ ಪಾವಿತ್ರ್ಯತೆ ಇದೆ. ಆರೋಗ್ಯ ಇಲಾಖೆಯ ನುರಿತ ಸಿಬ್ಬಂದಿಗಳು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಇವರದು ಸರಕಾರಿ ಕೆಲಸವಾದರೂ ಇದೊಂದು ಪುಣ್ಯದ ಕೆಲಸ ಎಂದು ಮುಂದೆ ನಿಂತು ಮಾಡಿರುವುದನ್ನು ನಾವು ಶ್ಲಾಘಿಸಲೇಬೇಕು.

