ಬಂಟ್ವಾಳ: ಯುವಕರಿಂದ ಹಿಂದೂ ಧರ್ಮದ ರಕ್ಷಣೆ ಅಗಬೇಕಾಗಿದೆ, ಧರ್ಮದ ಪ್ರತಿಪಾದನೆ, ಗೌರವದಿಂದ ಕಾಣುವ, ಪರಿಪಾಲನೆ ಮಾಡುವ, ಭೋದನೆ ಮಾಡುವ ಮಹತ್ತರ ಜವಬ್ದಾರಿ ಯುವಜನತೆಯ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ಕಚೇರಿಯ ಯೋಜನಾಧಿಕಾರಿ ದಿನೇಶ್ ಪೂಜಾರಿ ಹೇಳಿದರು.


ಜ್ಞಾನ ಜ್ಯೋತಿ ಗೆಳೆಯರ ಬಳಗ ಕೂರಿಯಾಳ , ದುರ್ಗಾನಗರ ಇದರ ಪ್ರಥಮ ವರ್ಷದ ಸಭಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶಿಸ್ತಿನ ಜೀವನ ದ ಜೊತೆಗೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಾಗ ಸಂಸ್ಕಾರವನ್ನು ಮರೆಯದಿರಿ ಎಂದು ಅವರು ಯುವಜನತೆಗೆ ಕಿವಿ ಮಾತು ಹೇಳಿದರು.
ಆಹಂ ತೊರೆದು ಭಜನೆ ಮಾಡಿದಾಗ ದೇವರಿಗೆ ಶರಣಾಗತಿಯಾದಾಗ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.
ಸರ್ವಸ್ವವನ್ನೂ ತ್ಯಾಗ ಮಾಡಿ ಸಮಾಜದ ಉದ್ಧಾರಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ದೇವರಿಗೆ ಸಮಾನರಾಗಿ ಕಾಣುತ್ತೇವೆ.
ಸಮಾಜದ ಋಣ ನಮ್ಮ ಮೇಲೆ ಇರುವುದರಿಂದ ಸಂಪಾದನೆಯ ಒಂದು ಭಾಗವನ್ನು ಸಮಾಜದ ಉದ್ಧಾರಕ್ಕಾಗಿ ತ್ಯಾಗಮಾಡಿ ಎಂದು ಅವರು ಹೇಳಿದರು.
ಇಲ್ಲಿನ ಓಂಕಾರೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಂಘಟನೆಯ ಜೊತೆಗೆ ಯುವಶಕ್ತಿಯ ಸಂಘಟನಾತ್ಮಕ ಶಕ್ತಿಯ ಜೋಡಣೆಯಾಗಲಿ ಅಮೂಲಕ ಗ್ರಾಮದ ಅಭ್ಯುದಯ ವಾಗಲಿ ಎಂದರು.
ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಉದ್ದೇಶದಿಂದ ಸಂಘ ಸಂಸ್ಥೆಗಳ ಉದಯವಾಗಬೇಕು.
ಸಂಘಸಂಸ್ಥೆಗಳ ಮೂಲಕ ದೇವಸ್ಥಾನ, ದೇವಸ್ಥಾನಗಳ ಅಭಿವೃದ್ಧಿಯಾಗಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಿದ್ದಕಟ್ಟೆ ಪ್ರೌಢ ಶಾಲಾ ಅಧ್ಯಾಪಕ ಮಹೇಶ್ ವಿ.ಕರ್ಕೇರ, ಮಂಗಳೂರು ಎಂ.ವಿ.ಶೆಟ್ಟಿ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಪವನ್ ಭಂಡಾರಿ, ಪ್ರಗತಿಪರ ಕೃಷಿಕ ಲೇಖಾಪ್ರಸನ್ನ ಭಂಡಾರಿ , ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿಸಿರೋಡು ವಲಯ ಮೇಲ್ವಿಚಾರಕ ಕೇಶವ, ಗ್ರಾಮಾಭಿವೃದ್ದಿ ಯೋಜನೆಯ ವಲಯ ಅಧ್ಯಕ್ಷ ಶೇಖರ್ ಸಾಮಾನಿ, ಜ್ಞಾನ ಜ್ಯೋತಿ ಗೆಳೆಯರ ಬಳಗದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಪಾಪುದಡ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಯೋಜನಾಧಿಕಾರಿ ದಿನೇಶ್ ಪೂಜಾರಿ ಅವರನ್ನು ಕೂರಿಯಾಳ ಒಕ್ಕೂಟದ ವತಿಯಿಂದ ವೇದಿಕೆಯಲ್ಲಿ ಗೌರವಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ವನಿತಾ ವಿ.ಬಂಗೇರ ಸ್ವಾಗತಿಸಿ, ಸಂಘದ ಸದಸ್ಯ ನಾಗೇಶ್ ವಂದಿಸಿದರು.












