ಬಂಟ್ವಾಳ: ಬಿಸಿರೋಡಿನ ಹೃದಯ ಭಾಗವಾದ ಮಿನಿವಿಧಾನ ಸೌಧದ ಕಚೇರಿಯ ಬಳಿಯಲ್ಲಿ ಪುರಸಭಾ ವ್ಯಾಪ್ತಿಯ ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಬಿಸಿರೋಡನಿಂದ ಕೈಕುಂಜೆ ಸಂಪರ್ಕದ ರಸ್ತೆಯಲ್ಲಿ ದಿನಕಳೆದಂತೆ ಬೀದಿ ವ್ಯಾಪಾರಿಗಳ ತಳ್ಳುಗಾಡಿಗಳು, ರಿಕ್ಷಾ ಟೆಂಪೋಗಳ ಮೂಲಕ ವ್ಯಾಪಾರ ವಹಿವಾಟುಗಳು ಜಾಸ್ತಿಯಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದೇ ರಸ್ತೆಯಲ್ಲಿ ಶಾಸಕರ ಕಚೇರಿ, ಮಿನಿ ವಿಧಾನ ಸೌಧ, ನ್ಯಾಯಾಲಯ, ತಾಲೂಕು ಪಂಚಾಯತ್, ಕೆ.ಇ.ಬಿ., ಶಿಕ್ಷಣ ಇಲಾಖೆ, ರೈಲು ನಿಲ್ದಾಣ, ಎ.ಪಿ.ಎಂ.ಸಿ, ಸಿ.ಡಿ.ಪಿ.ಒ, ಸಮಾಜ ಕಲ್ಯಾಣ ಇಲಾಖೆ ಹೀಗೆ ಎಲ್ಲಾ ಸರಕಾರಿ ಕಚೇರಿಗಳಿಗೆ ಇದೇ ರಸ್ತೆಯಲ್ಲಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದರೂ ಇಲ್ಲಿ ನಿತ್ಯ ರಸ್ತೆಯಲ್ಲಿ ಸಂಚಾರಕ್ಕೆ ತಳ್ಳುಗಾಡಿಗಳ ವ್ಯಾಪಾರದಿಂದ ಅಡಚಣೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಪುರಸಭೆ ಮಾಡಿಕೊಡುತ್ತಿದ್ದರೆ, ಅವರು ಬೀದಿಗೆ ಬರುವ ಅವಶ್ಯಕತೆ ಇರಲಿಲ್ಲ. ತಹಶೀಲ್ದಾರ್ ಅವರ ಕಚೇರಿಯ ಅಂಗಳದಲ್ಲಿ ಬೀದಿ ವ್ಯಾಪಾರಿಗಳು ಬೀಡು ಬಿಟ್ಟಿದ್ದಾರೆ, ಅದರೂ ಅವರು ಯಾಕೆ ಮೌನವಹಿಸಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.
ಶಾಸಕರು ಮತ್ತು ತಹಶೀಲ್ದಾರ್ ಅವರು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ ಬೀದಿ ವ್ಯಾಪಾರಿಗಳ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಹಾಗೂ ಇಲಾಖಾ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಪ್ರಸ್ತುತ ಅವರನ್ನು ಈ ರಸ್ತೆಯಿಂದ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

