ಬಂಟ್ವಾಳ: ತಮಿಳುನಾಡು ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆಂಡ್ ಟೆಕ್ನೊಲೊಜಿಕಲ್ ಮ್ಯೂಸಿಯಂ ಇವರ ಸಹಯೋಗದಲ್ಲಿ ಸತ್ಯಭಾಮ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನೋಲೊಜಿ ಚೆನೈ, ತಮಿಳುನಾಡು ಇಲ್ಲಿ ಜನವರಿ 18ರಿಂದ ಫೆಬ್ರವರಿ 1ರವರೆಗೆ 33ನೇ ದಕ್ಷಿಣ ಭಾರತ ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು. ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಾದ ನಿಕಿತ ಹಾಗೂ ಹಿತಾಕ್ಷಿ ಇವರು ತಯಾರಿಸಿದ ಮಾದರಿ ’ಕೇರ್ ಟೇಕರ್ ವಾಕಿಂಗ್ ಸ್ಟಿಕ್’ ಈ ಸ್ಪರ್ಧೆಗೆ ಆಯ್ಕೆಗೊಂಡು ನಾಲ್ಕನೇ ಸ್ಥಾನವನ್ನು ಪಡೆದಿದೆ.

ಅತ್ಯಾಧುನಿಕ ಮನೆಗಳಲ್ಲಿ ನೆಲಕ್ಕೆ ಹಾಸಿರುವ ಗ್ರಾನೈಟ್, ಮಾರ್ಬಲ್, ಟೈಲ್ಸ್ಗಳ ಮೇಲೆ ಬಿದ್ದಿರುವ ನೀರು ಗಮನಕ್ಕೆ ಬಾರದೆ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ನೆಲದ ಮೇಲಿನ ನೀರಿನ ಇರುವಿಕೆಯನ್ನು ಮೊದಲೇ ಮುನ್ಸೂಚಿಸುವ ಈ ವಾಕಿಂಗ್ ಸ್ಟಿಕ್ ಹಿರಿಯ ನಾಗರಿಕರಿಗೆ ಈ ಅಪಾಯದಿಂದ ರಕ್ಷಿಸುತ್ತದೆ. ಇದೇ ತಂತ್ರಜ್ಞಾನವನ್ನು ಪಾದರಕ್ಷೆಗಳಿಗೂ ಅಳವಡಿಸಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಈ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿ ರಾಜ್ಯಗಳಿಂದ ಸುಮಾರು ೨೭೫ ಮಾದರಿಗಳು ಪ್ರದರ್ಶಿಸಲ್ಪಟ್ಟಿದ್ದವು. ಕಾರ್ಮೆಲ್ ಶಾಲೆ ಹತ್ತನೇ ಬಾರಿ ಈ ವಿಜ್ಞಾನ ಮೇಳದಲ್ಲಿ ಪ್ರತಿನಿಧಿಸುತ್ತದೆ. ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ವಳಚ್ಚಿಲ್ ಇಲ್ಲಿಯ ಪ್ರೊ. ಸತೀಶ್ ಇವರು ಸಹಕರಿಸಿದ್ದರು. ವಿಜ್ಞಾನ ಶಿಕ್ಷರಾದ ಶ್ರೀ. ರೋಶನ್ ಪಿಂಟೊರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಮಾದರಿಯನ್ನು ತಯಾರಿಸಿರುತ್ತಾರೆ. ಮುಖ್ಯ ಶಿಕ್ಷಕಿ ಭಗಿನಿ ನವೀನ ಎ.ಸಿ. ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.