ಬಂಟ್ವಾಳ: ತೋಟವೊಂದರಲ್ಲಿ ಅನಾಥವಾಗಿದ್ದ ಕಾಡು ಬೆಕ್ಕಿನ ಮರಿಯನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಪಿಲಿಕುಳ ನಿಸರ್ಗ ಧಾಮದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.



ತಾಲೂಕಿನ ಮೊಡಂಕಾಪು ಎಂಬಲ್ಲಿ ಸತೀಶ್ ಶೆಟ್ಟಿ ಎಂಬವರಿಗೆ ಸೇರಿದ ತೋಟದಲ್ಲಿ ಶನಿವಾರ ಸಂಜೆ ಕಾಡು ಬೆಕ್ಕಿನ ಮರಿ ಕಂಡು ಬಂದಿದ್ದು ಅವರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕಾಡು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಅದನ್ನು ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.
ಅರಣ್ಯಾಧಿಕಾರಿ ಬಿ.ಸುರೇಶ್, ಸಿಬ್ಬಂದಿಯಾದ ವಿನಯ್, ಪ್ರೀತಂ, ಜಿತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ತೋಟದಲ್ಲಿ ಕಾಡು ಬೆಕ್ಕು ಸಹಿತ ಅದರ ಇತರ ಮರಿಗಳು ಇರುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ತೋಟದಲ್ಲಿ ಗಮನ ಹರಿಸಲಾಗುವುದು ಎಂದು ಅರಣ್ಯಾಧಿಕಾರಿ ಬಿ.ಸುರೇಶ್ ತಿಳಿಸಿದ್ದಾರೆ.