ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ ಆಂತರಿಕ ಗುಣಮಟ್ಟ ಭರವಸೆ ಕೋಶ, ಉದ್ಯೋಗ ಭರವಸೆ ಕೋಶ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ IAS/KAS ಸ್ಪರ್ಧಾತ್ಮಕ ಪರೀಕಾ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.
ರಶ್ಮಿ ಹೆಚ್.ಆರ್ ತಹಶೀಲ್ದಾರರು, ಬಂಟ್ವಾಳ ತಾಲೂಕು ಇವರು ಸಂಪನ್ಮೂಲ ವ್ಯಕಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿ ಜೀವನ ಜೀವನದ ಸುಮಧುರ ಕ್ಷಣವಾಗಿದ್ದು ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಂಡು ತಮ್ಮ ಅಂತಶಕ್ತಿಗೆ ಅನುಗುಣವಾದ ಉದ್ಯೋಗ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ತಮ್ಮ ಆಯ್ಕೆಯಲ್ಲಿ ಹಣಕ್ಕಿಂತಲೂ ನಿಮ್ಮ ಆದರ್ಶಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದರು. IAS/KAS ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪದ ಕುರಿತು ಮಾತನಾಡಿದ ಅವರು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಈ ಪರೀಕ್ಷೆಗಳಲ್ಲಿ ಯಶಸ್ಸು ತಂದುಕೊಡಬಲ್ಲದು. ಜನರ ಸೇವೆಯ ಹಂಬಲವುಳ್ಳವರಿಗೆ IAS/KAS ಸೇವೆ ಉತ್ತಮ ವೇದಿಕೆ. ಸಾಧಿಸುವ ಛಲವಿದ್ದರೆ ಈ ಪರೀಕ್ಷೆಗಳು ಗ್ರಾಮೀಣ ವಿದ್ಯಾರ್ಥಿಗಳಿಗೂ ಕೈಗೆಟಕದವುಗಳೇನಲ್ಲ ಎಂದು ಹೇಳಿ IAS/KAS ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು.



ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಪ್ರಭಾಕರ ಪ್ರಭು, ಸದಸ್ಯರು ತಾಲೂಕು ಪಂಚಾಯತ್ ಬಂಟ್ವಾಳ ಮಾತನಾಡಿ ಹಿನ್ನಡೆ ಅಥವಾ ಸೋಲಿಗೆ ಚಿಂತಿಸದೆ ನಿರಂತರ ಪ್ರಯತ್ನ ಮಾಡಿದರೆ ಸಾಧನೆ ಸಾಧ್ಯ. ಸಾಧನೆಯಿಂದ ಸಮಾಜ ಸೇವೆ ಸಾಧ್ಯ. ಆದ್ದರಿಂದ IAS/KAS ಸ್ಪರ್ಧಾತ್ಮಕ ಪರೀಕ್ಷೆಗಳಂತ ಅವಕಾಶಗಳನ್ನು ವಿದ್ಯಾರ್ಥಿಗಳು ಸಮಾಜಸೇವೆಗಾಗಿ ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿಯೆ ಜಾಗೃತರಾಗಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಹಲವಾರು ವಿಚಾರಗಳ ಕುರಿತು ಸೂಕ್ತ ಮಾರ್ಗದರ್ಶನವನ್ನು ನೀಡಲು ಕಾಲೇಜು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಬದುಕು ರೂಪಿಸಿಕೊಳ್ಳಲು ಹಾಗೂ ಸ್ವಾವಲಂಬಿಯಾಗಲು ಸಮಾಜದಲ್ಲಿ ಮಾದರಿಯಾದ ವ್ಯಕ್ತಿಗಳ ಪರಿಚಯ ಹಾಗೂ ಅವರಿಂದ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳು ಆ ಎಲ್ಲದರ ಸದುಪಯೋಗ ಪಡೆದುಕೊಂಡು ನಿಮ್ಮದೇ ಆದ ಗುರಿಗಳನ್ನು ಕಟ್ಟಿಕೊಂಡು ಅಡೆತಡೆಗಳನ್ನು ಮೀರಿ ಸಾಧನೆಯನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ರಾಜ್ಯದ ವಿವಿಧ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ತರಬೇತಿ ನೀಡುವ ಯೋಜನೆಯಲ್ಲಿ ಈ ಕಾರ್ಯಕ್ರಮವನ್ನು ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಹನುಮಂತಯ್ಯ ಜಿ.ಹೆಚ್ ಸಂಯೋಜಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ತೃತೀಯ ಬಿಕಾಂ ನಿರ್ವಹಿಸಿದರು. ಸ್ವಾತಿ ತೃತೀಯ ಬಿ.ಕಾಂ. ಸ್ವಾಗತಿಸಿದ ಕಾರ್ಯಕ್ರಮದಲ್ಲಿ, ದೀಕ್ಷಿತಾ ತೃತೀಯ ಬಿ.ಕಾಂ. ವಂದಿಸಿದರು. ಅಕ್ಷತಾ ತೃತೀಯ ಬಿಕಾಂ ಪ್ರಾರ್ಥಿಸಿದರು. ಎಲ್ಲಾ ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು.