ಬಂಟ್ವಾಳ: ಸೈಬರ್ ಅಪರಾಧವು ಆಧುನಿಕ ಕಾಲದ ಒಂದು ದೊಡ್ಡ ಸಾಮಾಜಿಕ ಪಿಡುಗು ಎಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ ಎನ್ ಹೇಳಿದರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಸಮಾಜಶಾಸ್ತ್ರ ಸಂಘದ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ, ಜನಸಾಮಾನ್ಯರು ಸೈಬರ್ ಅಪರಾಧದಂತಹ ಕೃತ್ಯಕ್ಕೆ ಬಲಿ ಪಶುಗಳಾಗುತ್ತಿದ್ದಾರೆ. ಇಂದು ಮುಖ್ಯವಾಗಿ ಹಣ ಗಳಿಸುವ ಉದ್ದೇಶದಿಂದ ಸೈಬರ್ ಅಪರಾಧದ ಮುಖಾಂತರ ಜನಸಾಮಾನ್ಯರನ್ನು ಮೋಸಗೊಳಿಸುವ ಸನ್ನಿವೇಶಗಳು ಹೆಚ್ಚಾಗಿವೆ. ಈ ಅಪರಾಧಕ್ಕೆ ಬಲಿಪಶುವಾಗದಂತೆ ಹೇಗೆ ಜನರು ಜಾಗೃತರಾಗಿರಬೇಕೆಂಬ ಬಗ್ಗೆ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಸತೀಶ್ಗಟ್ಟಿ ಇವರು ಇಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್ ಹಾಗೂ ಸಂಪರ್ಕ ಮಾಧ್ಯಮದ ಬಳಕೆ ವಿಪರೀತವಾಗಿದ್ದು, ಸೈಬರ್ ಅಪರಾಧದ ಜಾಲಕ್ಕೆ ಬಲಿ ಆಗದಂತೆ ಎಚ್ಚರಿಕೆ ವಹಿಸುವುದು ಅತಿ ಅಗತ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ ಯು ಇವರು ಉಪಸ್ಥತರಿದ್ದರು. ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಭವ್ಯ ಸ್ವಾಗತಿಸಿದರು. ಧನಲಕ್ಷ್ಮಿ ವಂದಿಸಿದರು.
