ಬಂಟ್ವಾಳ: ಪ್ರವಾದಿ ನಿಂದನೆ ಹಾಗೂ ಧಾರ್ಮಿಕ ಭಾವನೆಗೆ ದಕ್ಕೆ ಉಂಟುಮಾಡಿರುವ ಆರೋಪದ ಮೇರೆಗೆ ಖಾಸಗಿ ಸುದ್ದಿವಾಹಿನಿಯೊಂದರ ನಿರೂಪಕ ಅಜಿತ್ ಹನುಮಕ್ಕನವರ್ ಮತ್ತು ಕಾರ್ಯಕ್ರಮ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ಸಲ್ಲಿಕೆಯಾಗಿದೆ. ಇಲ್ಲಿನ ಕುಮೇರು ನಿವಾಸಿ ಸಬೀರ್ ರಹಿಮಾನ್ ಎಂಬವರು ಈ ದೂರು ನೀಡಿದ್ದಾರೆ. ಡಿ.27ರಂದು ರಾತ್ರಿ 7ಗಂಟೆಗೆ ಖಾಸಗಿ ಸುದ್ದಿವಾಹಿನಿ (ಸುವರ್ಣ ನ್ಯೂಸ್ 24*7)ನಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಅವರ ಜೀವನ ಶೈಲಿಯ ಬಗ್ಗೆ ಕೀಳು ಮಟ್ಟದಲ್ಲಿ ನಿಂದಿಸಲಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಹಾಗೂ ವೈಯಕ್ತಿಕವಾಗಿ ನೋವಾಗಿದೆ. ಕೋಮು ಸೌಹಾರ್ದಕ್ಕೆ ದಕ್ಕೆ ಉಂಟುಮಾಡಿರುವ ಅಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ದೂರಿನಲ್ಲಿ ಒತ್ತಾಯಿಸಲಾಗಿದೆ. ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಅವರು ದೂರು ಸ್ವೀಕರಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಲೀಮ್ ಫರಂಗಿಪೇಟೆ, ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಅಧ್ಯಕ್ಷ ಯೂಸುಫ್ ಆಲಡ್ಕ, ಪಿಎಫ್ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯರಾದ ಝಕರಿಯಾ ಕಲ್ಲಡ್ಕ, ಅಬೂಬಕರ್ ಮದ್ದ, ಇಸಾಕ್ ಶಾಂತಿಅಂಗಡಿ, ಪುರಸಭಾ ಸದಸ್ಯ ಮೂನಿಶ್ ಅಲಿ, ಇಸ್ಮಾಯಿಲ್ ಬಾವಾ, ಸಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸಲ್ಮಾನ್ ಬೋಗೊಡಿ ಉಪಸ್ಥಿತರಿದ್ದರು.

