ಬಂಟ್ವಾಳ: ಸರಕಾರದ ಸವಲತ್ತುಗಳು ಗ್ರಾಮೀಣ ಮಟ್ಟದಲ್ಲಿ ಜನಸಮಾನ್ಯರಿಗೆ ಕ್ಲಪ್ತ ಸಮಯದಲ್ಲಿ ಅತೀ ಶೀಘ್ರವಾಗಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳನ್ನು ಪಿಡಿಒಗಳು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ಸವಲತ್ತನ್ನು ಅತೀ ಶೀಘ್ರವಾಗಿ ತಲುಪಿಸುವುದರ ಜೊತೆಗೆ ಗ್ರಾಮದ ಅಭಿವೃದ್ದಿಯ ನಿಟ್ಟಿನಲ್ಲು ಮುಂದಾಗಬೇಕೆಂದ ಶಾಸಕರು ಪಿಡಿಒಗಳ ಅಹವಾಲನ್ನು ಆಲಿಸಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಪಿಡಿಒಗಳಿಗೆ ಕಲವೊಂದು ಸಲಹೆ, ಸೂಚನೆಯನ್ನು ನೀಡಿದರು. ತಾಲೂಕಿನ ವಿವಿಧ ಗ್ರಾಮಪಂಚಾಯತ್ ನ ಪಿಡಿಒಗಳು ಹಾಜರಿದ್ದು,ತಮ್ಮ, ತಮ್ಮ ಗ್ರಾಮದಲ್ಲಾದ ಪ್ರಗತಿಯನ್ನು ಮಂಡಿಸಿದರು.














