Thursday, February 13, 2025

ಗುರುಪುರ ಬಂಟರ ಮಾತೃ ಸಂಘ(ರಿ) ವಾರ್ಷಿಕ ಸಮಾವೇಶ ; ವಿದ್ಯಾರ್ಥಿವೇತನ ವಿತರಣೆ

ಸಾಧನೆ ಮೆಟ್ಟಿಲೇರುವ ವಿದ್ಯಾರ್ಥಿಗಳ ಗುರುತಿಸಿ ಸನ್ಮಾನಿಸಬೇಕು : ಸಂಸದ ನಳಿನ್
ಮತ ಹಾಕಿದವರ ಭಾವನೆ ಗೌರವಿಸುವೆ : ಸಂಸದ ನಳಿನ್
ಗುರುಪುರ : ಸಾಧನೆಯ ಗುರಿ ಮುಟ್ಟಬೇಕಾದರೆ ಕರ್ತವ್ಯದ ಅರಿವು ಇರಬೇಕಾಗುತ್ತದೆ ಮತ್ತು ಅಂತಹ ಕರ್ತವ್ಯದ ಹುಚ್ಚು ಈ ಸಂಘಕ್ಕಿದೆ. ವೈದ್ಯರು, ಇಂಜಿನಿಯರ್ ಅಥವಾ ಉನ್ನತ ಸ್ಥಾನಕ್ಕೇರಿದ ವ್ಯಕ್ತಿಗಳ ಸಾಧನೆ ಗುರುತಿಸಿ ಸನ್ಮಾನಿಸುವ ಬದಲಾಗಿ, ಸಾಧನೆಯ ಮೆಟ್ಟಿಲೇರುವ ವಿದ್ಯಾರ್ಥಿಗಳು, ಅರ್ಹರ ಗುರುತಿಸಿ ಸನ್ಮಾನಿಸುವುದು ಸಂಘದ ಆದ್ಯ ಕರ್ತವ್ಯ ಅಥವಾ ಸಮಾಜ ಕಾರ್ಯವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಗುರುಪುರ ಕುಕ್ಕುದಕಟ್ಟೆಯಲ್ಲಿ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ಸಂಸದ ಕಟೀಲ್, ಜಿಲ್ಲೆಯ ಅಭಿವೃದ್ಧಿಗಾಗಿ ಕ್ರಿಯಾತ್ಮಕ ಯೋಜನೆಗಳಿವೆ. ತನಗೆ ಮತ ಹಾಕಿದವರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಹಾಗೂ ಪ್ರಧಾನಿ ಮೋದೀಜಿಯವರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸಂಸದರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವ ಪಾಲಕರು, ಮಕ್ಕಳಿಗೆ ನಮ್ಮ ಸಂಸ್ಕೃತಿ-ಸಂಸ್ಕಾರ ಪರಿಚಯಿಸುವಲ್ಲಿ ಸೋತಿದ್ದಾರೆ. ಹಾಗಾಗಿ ಇಂದಿನ ಮಕ್ಕಳು ತಮ್ಮ ಪಾಲಕರು, ಸಮಾಜ, ನಾಡಿನ ಋಣದ ಬಗ್ಗೆ ಹೆಚ್ಚೇನೂ ತಲೆಗೆಡಿಸಿಕೊಳ್ಳುವುದಿಲ್ಲ. ಇದು ಇಂದಿನ ದುರಂತ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ ಸಂಘದ ಯೋಜನೆಗಳ ಬಗ್ಗೆ ಸಮಾಜ ಬಾಂಧವರಿಗೆ ತಿಳಿಸುತ್ತ, ಈಗ ಸಂಘವು ೭೫ ಮಂದಿ ವಿಕಲಚೇತನರಿಗೆ ಮಾಸಿಕ ೫೦೦ ರೂ ನೀಡುತ್ತಿದ್ದು, ಸಮಾಜದಲ್ಲಿರಬಹುದಾದ ವಿಕಲಚೇತನರ ಗುರುತಿಸಿ ಸಂಘದ ಗಮನಕ್ಕೆ ತನ್ನಿ. ಅವರಿಗೂ ಮಾಸಿಕ ವೇತನ ನೀಡಲಾಗುವುದು. ಅಲ್ಲದೆ ಸಮಾಜದ ನಿರ್ಗತಿಕ ಹೆಣ್ಣು ಮಕ್ಕಳಿಗೂ ನೆರವು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ ೯೦ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳನ್ನು ವಿದ್ಯಾರ್ಥಿವೇತನದೊಂದಿಗೆ ಸನ್ಮಾನಿಸಲಾಯಿತು. ಉಳಿದಂತೆ ಅರ್ಹ ವಿದ್ಯಾರ್ಥಿಗಳ ಅಭಿನಂದಿಸಿ, ಕೆಲವು ಬಡ ಕುಟುಂಬಗಳಿಗೆ ನೆರವು ನೀಡಲಾಯಿತು. ಸಂಘದ ವತಿಯಿಂದ ಸುಮಾರು ಐದು ಲಕ್ಷ ರೂ ವಿದ್ಯಾರ್ಥಿವೇತನ ಹಾಗೂ ನೆರವಿನ ಮೊತ್ತ ನೀಡಲಾಯಿತು. ಉದ್ಯಮಿ ರವೀಂದ್ರನಾಥ ರೈ ಪದವು ಮೇಗಿನಮನೆ ಹಾಗೂ ಇತರ ಗಣ್ಯರು ಸಂಘದ ಸಾಧನೆ ಗುಣಗಾಣ ಮಾಡಿದರು. ಈ ವೇಳೆ ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು ಅವರು ಗುರುಪುರ ಬಂಟರ ಮಾತೃ ಸಂಘದ ಕಟ್ಟಡ ನಿರ್ಮಿಸಲು ದಾನ ಮಾಡಿದ ಒಂದು ಎಕ್ರೆ ಜಾಗದ ದಾಖಲೆಪತ್ರ ಹಸ್ತಾಂತರಿಸಿದರು.
ಬಾಕ್ಸ್ :
ಯೋಕ್ಷಾಗೆ ನೆರವು :
ಮಾರಣಾಂತಿಕ ‘ಗೌಚರ್’ ಕಾಯಿಲೆಯಿಂದ ಬಳಲುತ್ತಿರುವ ಗುರುಪುರ ಮೂಳೂರು ಸೈಟ್ ಮಠದಗುಡ್ಡೆಯ ನಿವಾಸಿ ಪೂಜಾ-ಸಂತೋಷ್ ದಂಪತಿಯ ಎರಡೂವರೆ ವರ್ಷದ ಪುತ್ರಿಗೆ ಸಂಘ ಹಾಗೂ ಪುರುಷೋತ್ತಮ ಮಲ್ಲಿ ವೈಯಕ್ತಿಕ ನೆಲೆಯಲ್ಲಿ ನೆರವಿನ ಚೆಕ್ ನೀಡಿದರು.
ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ರವಿರಾಜ ಶೆಟ್ಟಿ ನಿಟ್ಟೆಗುತ್ತು(ಅಧ್ಯಕ್ಷ, ಮಂಗಳೂರು ತಾಲೂಕು ಬಂಟರ ಸಂಘ), ಆನಂದ ಶೆಟ್ಟಿ (ಅಧ್ಯಕ್ಷ, ಕಾವೂರು ಬಂಟರ ಸಂಘ), ದೇವಿಚರಣ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು, ಮುರಳೀಧರ ಶೆಟ್ಟಿ(ಅಧ್ಯಕ್ಷ, ಶ್ರೀರಾಮ ಭಜನಾ ಮಂದಿರ ಎಡಪದವು). ವಿನಯ ಕುಮಾರ ಶೆಟ್ಟಿ ಮಾಣಿಬೆಟ್ಟುಗುತ್ತು(ಅಧ್ಯಕ್ಷ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ) ಸುಬ್ಬಯ್ಯ ಶೆಟ್ಟಿ ಬರ್ಕೆ, ಉದ್ಯಮಿ ಉಮೇಶ್ ಮುಂಡ, ಸಚ್ಚಿದಾನಂದ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ಶೆಟ್ಟಿ ವಾಮಂಜೂರು ಬೆಳ್ಳೂರುಗುತ್ತು, ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ರೈ ಉಳಾಯಿಬೆಟ್ಟು, ಉದಯ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮೊದಲಾವರಿದ್ದರು. ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ಗುರುಪುರ ಲೆಕ್ಕಪತ್ರ ಮಂಡಿಸಿದರು. ಸುದರ್ಶನ ಶೆಟ್ಟಿ ಪೆರ್ಮಂಕಿ ಹಾಗೂ ರಾಜೀವ್ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಸಾದರಗೊಂಡಿತು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...