ಮುಂಬಯಿ (ಸುರತ್ಕಲ್), ಜೂ.೧೮: ಬಂಟರ ಸಮಾಜದ ಯುವಕರು ಸಂಘ ಸಂಸ್ಥೆಗಳಲ್ಲಿ ಭಾಗವಹಿಸಿ ಮುಂದೆ ಸಮಾಜದ ನಾಯಕತ್ವ ವಹಿಸಲು ಸಿದ್ಧರಾಗಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕರೆಯಿತ್ತರು.

ಕಳೆದ ಭಾನುವಾರ ಬಂಟರ ಸಂಘ ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾಥಿ ವೇತನ ವಿತರಣೆ ಕಾರ್ಯಕ್ರಮ ನಡೆಸಲ್ಪಟ್ಟಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಐಕಳ ಹರೀಶ್ ಮನೆ ನಿರ್ಮಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ಕೀಲಿ ಹಸ್ತಾಂತರಿಸಿದ ಐಕಳ ಹರೀಶ್ ಜಾಗತಿಕ ಬಂಟರ ಸಂಘದಿಂದ ಸಮಾಜದ ಬಡವರಿಗೆ ನೂರು ಮನೆ ನಿರ್ಮಿಸುವ ಯೋಜನೆ ಇದ್ದು, ಈ ಪೈಕಿ ಐವತ್ತು ಮನೆ ನಿರ್ಮಾಣ ಕಾರ್ಯ ಅರಂಭಿಸಲಾಗಿದೆ. ಇದೀಗಲೇ ಇಪ್ಪತ್ತೈದು ಮನೆ ಪೂರ್ಣವಾಗಿದೆ ಎಂದರು.
ಬಂಟರ ಯಾನೆ ನಾವಡರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ ಸಮಾರಂಭ ಉದ್ಘಾಟಿಸಿ ಯಾವುದೇ ಸಂಘ ಸ್ಥಾಪನೆ ಮಾಡುವ ಹಿಂದಿನ ಉದ್ದೇಶವೆಂದೆ ಸಂಘದ ಮುಖಾಂತರ ಸಮಾಜದ ಜನತೆಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಮೂಲಕ ಸಾಮಾಜಿಕ, ಧಾರ್ಮಿಕವಾಗಿ ಎಲ್ಲ ಜನರೊಂದಿಗೆ ಬೆರೆಯುವಂತಹ ಕೆಲಸವನ್ನು ಮಾಡುತ್ತಾ ಮುನ್ನಡೆಸಬೇಕೆಂಬುದು ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿನ ಎಲ್ಲಾ ಜನರೊಂದಿಗೆ ಒಟ್ಟಾಗಿ ಬೆರೆತುಕೊಂಡು ಹೋಗು ವುದು ಒಂದು ಸಂಘದ ಕರ್ತವ್ಯವಾ ಗಿದೆ. ಅದಕ್ಕಾಗಿ ಇಂದು ಬಂಟರ ಸಂಘ ಬಹಳಷ್ಟು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮದ ಮೂಲಕ ಹೆಸರನ್ನು ಸಾಧಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಮಾಹಿತಿ ಪುಸ್ತಕ ಪೊಲಬು ಬಿಡುಗಡೆ ಗೊಳಿಸಿದ ಶ್ರೀದೇವಿ ಎಜುಕೇಶನಲ್ ಟ್ರಸ್ಟ್ ಚೇರ್ಮೆನ್ ಎ.ಸದಾನಂದ ಶೆಟ್ಟಿ ಮಾತನಾಡಿ ಬಂಟರ ಸಂಘದ ವತಿಯಿಂದ ಪ್ರತಿ ಸಮಾಜದ ಬಡ ಜನರ ನೋವನ್ನು ನೀಗಿಸುವ ಕೆಲಸವನ್ನು ಮಾಡಿದೆ. ಸಾಮಾಜಿಕ ವಾಗಿ ಧಾರ್ಮಿಕ ಎಲ್ಲಾ ಕಾರ್ಯಗಳಲ್ಲಿ ತನ್ನ ಮೇಲುಗೈ ಸಾಧಿಸಿದೆ ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮಾತನಾಡಿ ಐಎಎಸ್ ಐಪಿಎಸ್ ಮಾಡುವವರಿಗೆ ಹಾಗೂ ಸಬ್ ಇನ್ಸ್ಪೆಕ್ಟರ್ ಸ್ಪಧಾತ್ಮಕ ಪರೀಕ್ಷೆ ಬರೆಯುವವರಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.ಪಡುಬಿದ್ರೆ ಬಂಟರ ಸಂಘ ಅಧ್ಯಕ್ಷ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪ್ರಸಾದ್ ಗ್ರೂಪ್ ಆಫ್ ಹೋಟೆಲ್ಸ್ ಮಲಾಡ್, ಮುಂಬಯಿ ಇದರ ಆಡಳಿತ ನಿರ್ದೇಶಕ ಬಾಬು ಶೆಟ್ಟಿ ಪೆರಾರ, ಬಂಟರ ಯಾನೆ ನಾಡ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಕೋಶಾಕಾರಿ ರತ್ನಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಬಂಟರ ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ಅವರು ಫಲಾನುಭವಿಗಳಿಗೆ ಎರಡು ಮನೆಗಳನ್ನು ಹಸ್ತಾಂತರಿಸಿದರು. ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಲಾಯಿತು ಮತ್ತು ವಿಧವೆಯರಿಗೆ, ಭಿನ್ನ ಸಾಮಾರ್ಥ್ಯದವರಿಗೆ ಹಾಗೂ ವಿಕಲಚೇತನರಿಗೆ ಸಹಾಯಹಸ್ತ ನೀಡಲಾಯಿತು. ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಸುರತ್ಕಲ್ ಬಂಟರ ಸಂಘದಿಂದ ನಡೆದ ಗ್ರಾಮವಾರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇಡ್ಯಾ ಗ್ರಾಮ ಪ್ರಥಮ, ಚೇಳಾರ್ ದ್ವಿತೀಯ, ಸುರತ್ಕಲ್ ತೃತೀಯ ಪ್ರಶಸ್ತಿ ಗಳಿಸಿತ್ತು. ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಸ್ವಾಗತಿಸಿದರು. ನವೀನ್ ಶೆಟ್ಟಿ ಪಡ್ರೆ ಪ್ರಸ್ತಾವನೆಗೈದರು. ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ವಂದಿಸಿದರು.