Tuesday, February 11, 2025

ಜ.31, ಫೆ.1: ಎರಡು ದಿನ ಬ್ಯಾಂಕ್ ಬಂದ್

ಮಂಗಳೂರು: ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸೇವೆ ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರ ಒಕ್ಕೂಟಗಳು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಬ್ಯಾಂಕುಗಳ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಬ್ಯಾಂಕ್ ಯೂನಿಯನ್ಸ್ ಘೋಷಣೆ ಮಾಡಿದೆ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಯೊಂದಿಗಿನ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ನಂತರ, ಬ್ಯಾಂಕ್ ನೌಕರರ ಸಂಘಗಳು ಜ.31 ಮತ್ತು ಫೆ.1 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.
ಇನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್ ಅನ್ನು ಫೆ.1 ರಂದು ಮಂಡನೆ ಮಾಡಲಿದ್ದು, ಅಂದೇ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಲಾಗಿದೆ ಎನ್ನಲಾಗುತ್ತಿದೆ.
ಬ್ಯಾಂಕ್ ನೌಕರರ ವಿವಿಧ ಸಂಘಟನೆಗಳು ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, 2017ರ ನವೆಂಬರ್‌ನಿಂದ ವೇತನ ಹೆಚ್ಚಳಕ್ಕೆ ಕಾದಿರುವ ನೌಕರರು ಕೂಡ ಪ್ರತಿಭಟನೆಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಇದರ ಬಗ್ಗೆ ಮತ್ತಷ್ಟು ಮಾತುಕತೆಗಾಗಿ ಒಕ್ಕೂಟಗಳು ಮುಷ್ಕರವನ್ನು ಮುಂದೂಡುವುದನ್ನು ಐಬಿಎ ಬಯಸಿತ್ತು. ಆದರೆ ಬ್ಯಾಂಕ್ ಮ್ಯಾನೇಜ್‌ಮೆಂಟ್ ಕಡೆಯಿಂದ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಮುಷ್ಕರ
ಶೇ 20ರಷ್ಟು ವೇತನ ಏರಿಕೆ, ನೌಕರರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಉತ್ತೇಜನ, ಸಿಬ್ಬಂದಿ ಕಲ್ಯಾಣ ವೇತನ ಹೆಚ್ಚಳ, ಎಲ್ಲರಿಗೂ ಒಂದೇ ಸಮಯ ನಿಗದಿ, ಹೊಸ ಪಿಂಚಣಿ ಯೋಜನೆ ರದ್ದು, ಬೇಸಿಕ್ ಪೇ ಜತೆಗೆ ವಿಶೇಷ ಭತ್ಯೆಯನ್ನು ವಿಲೀನಗೊಳಿಸುವುದು, ವಾರಕ್ಕೆ ಐದು ದಿನ ಮಾತ್ರ ಕೆಲಸ ಮುಂತಾದ ಬೇಡಿಕೆಗಳನ್ನು ಇರಿಸಲಾಗಿದೆ.

ಬೇಡಿಕೆ ಈಡೇರದೆ ಇದ್ದರೆ ಮತ್ತೆ ನಡೆಯಲಿದೆ ಮುಷ್ಕರ
ಜ 31 ಮತ್ತು ಫೆ. 1ರಂದು ಸಾಂಕೇತಿಕ ಬ್ಯಾಂಕ್ ಮುಷ್ಕರ ನಡೆಯಲಿದ್ದು, ಫೆ. 2ರಂದು ಭಾನುವಾರ ಇರುವುದರಿಂದ ಸತತ ಮೂರು ದಿನ ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ. ಒಂದು ವೇಳೆ ಈ ಮುಷ್ಕರದ ಬಳಿಕವೂ ಬೇಡಿಕೆ ಈಡೇರದೆ ಇದ್ದರೆ, ಮಾರ್ಚ್ 11ರಿಂದ ಮತ್ತೆ ಮೂರು ದಿನ ಮುಷ್ಕರ ನಡೆಯಲಿದೆ. ಏಪ್ರಿಲ್ 1ರಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ.

ಎಟಿಎಂಗಳಲ್ಲಿ ನಗದು ಖಾಲಿಯಾಗುವ ಸಾಧ್ಯತೆ ಇದೆ
ಶುಕ್ರವಾರ ಮತ್ತು ಶನಿವಾರ ಬ್ಯಾಂಕ್ ವಹಿವಾಟು ಇಲ್ಲದೇ ಇರುವುದರಿಂದ ಇಂದೇ ಎಲ್ಲ ವಹಿವಾಟುಗಳನ್ನು ಪೂರೈಸಿಕೊಳ್ಳಬೇಕು. ಹಾಗೆಯೇ ಸತತ ಮೂರು ದಿನ ಬ್ಯಾಂಕ್ ಬಂದ್ ಇರುವುದರಿಂದ ಎಟಿಎಂಗಳಲ್ಲಿ ಹಣ ಖಾಲಿಯಾಗಿ, ಎಲ್ಲ ಕಡೆ ‘ಔಟ್ ಆಫ್ ಸರ್ವೀಸ್’ ಫಲಕ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಗದು ಹಣಕ್ಕಾಗಿ ಪರದಾಟ ಎದುರಾಗಬಹುದು. ಸ್ಥಗಿತಗೊಳ್ಳುವ ಎಟಿಎಂಗಳು ಸಕ್ರಿಯವಾಗಲು ಸೋಮವಾರದವರೆಗೆ ಕಾಯಬೇಕಾಹಬಹುದು.

More from the blog

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...