‘ಬಲೇ ಚಾ ಪರ್ಕ…’ ಇದು ಕಳೆದ ಮೂರು ದಶಕಗಳ ಹಿಂದಿನ, ಜನಮನ್ನಣೆ ಗಳಿಸಿ ನಾಟಕ ರಂಗದಲ್ಲೊಂದು ಅದ್ಭುತ ಕ್ರಾಂತಿಯನ್ನೇ ಉಂಟುಮಾಡಿದ ನಾಟಕ. ಇದರ ಸೂತ್ರದಾರ ದೇವದಾಸ್ ಕಾಪಿಕಾಡ್. ಇದು ಅವರನ್ನು ಪ್ರಸಿದ್ಧಿಯ ಉತ್ತುಂಗಕ್ಕೆ ಕೊಂಡೊಯ್ದ ನಾಟಕ. ಈಗಲೂ ಅದೇ ಹೆಸರನ್ನಿತ್ತು ತಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಶತಮಾನದತ್ತ ಸಾಗುತ್ತಿರುವ ಸರಕಾರಿ ಶಾಲೆಗೆ ಇದೇ ‘ಬಲೇ ಚಾ ಪರ್ಕ…’ ಶೀರ್ಷಿಕೆಯನ್ನಿತ್ತು ತಮ್ಮ ಶಾಲಾ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳನ್ನು ಸೆಳೆಯಲು ವಿನೂತನ ಪ್ರಯತ್ನ ನಡೆಯುತ್ತಾ ಇದೆ. ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆಗೈದಿದ್ದು ಈಗ ಅವರನ್ನೆಲ್ಲಾ ‘ಬಲೇ ಚಾ ಪರ್ಕ’ ಎಂಬ ವಿನೂತನ ಕಾರ್ಯಕ್ರಮಗಳೊಂದಿಗೆ ಒಟ್ಟು ಸೇರಿಸುವುದಕ್ಕಾಗಿ ಮಾರ್ಚ್ ಮೂರರಂದು ಚಾಪರ್ಕ ತಂಡದ ಸಂಸ್ಥಾಪಕ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್ರನ್ನೇ ವಿಶೇಷ ಅತಿಥಿಯಾಗಿ ಆಹ್ವಾನಿಸಲಿದ್ದಾರೆ.




ಬಿ.ಸಿ.ರೋಡಿನ ಹೃದಯಭಾಗವಾದ ಪಿಂಟೋ ಕಾಂಪ್ಲೆಕ್ಸ್ ಇರುವ ಜಾಗದಲ್ಲಿ ಖಾಸಗಿ ಕಟ್ಟಡದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿದ್ದು ೪೫ ವರ್ಷಗಳ ಕಾಲ ಅಲ್ಲೇ ಕಾರ್ಯ ನಿರ್ವಹಿಸಿ ಬಳಿಕ ಅದೇ ಶಾಲೆಯು ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿ ಸರಕಾರಿ ಸ್ವಂತ ಜಾಗ ಪಡೆದು ಸ್ವಂತ ಕಟ್ಟಡ ನಿರ್ಮಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಮೂಲಕ ಜ್ಞಾನ ದೇಗುಲವಾಗಿದೆ. ಶತಮಾನದತ್ತ ಸಾಗುತ್ತಿರುವ ಈ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸಫಲತೆಯನ್ನು ಹೊಂದಿದ್ದೇ ಹೆಚ್ಚು. ಇಲ್ಲಿ ಪ್ರಾಥಮಿಕ ವಿದ್ಯಭ್ಯಾಸವನ್ನು ಮಾಡಿದ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಯನ್ನು ಏರಿದ್ದಾರೆ. ಬಿ.ಸಿ.ರೋಡಿನಲ್ಲಿಯೇ ಸ್ವಂತ ಆಸ್ಪತ್ರೆಯನ್ನೇ ನಿರ್ಮಿಸಿ ನಡೆಸುತ್ತಿದ್ದಾರೆ. ಹಾಗೆಯೇ ಜಿಲ್ಲೆಯಲ್ಲೇ ಪ್ರತಿಷ್ಠಿತ ಉದ್ಯಮಿಗಳಾಗಿಯೂ, ಇಂಜಿನಿಯರ್, ಶ್ರೇಷ್ಠ ವಕೀಲರು, ಉಪನ್ಯಾಸಕರು, ಅಧ್ಯಾಪಕರು, ಕೃಷಿಕರು, ಕಾರ್ಮಿಕರು, ಸರಕಾರಿ ಅಧಿಕಾರಿಗಳು, ಖಾಸಗಿ ರಂಗ ಸಿಬ್ಬಂದಿಗಳು, ಲೇಖಕರು, ಸಾಹಿತಿಗಳು, ಕಲಾವಿದರು ಹೀಗೆ ಹತ್ತು ಹಲವು ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಮತ್ತು ವಿದೇಶದಲ್ಲಿಯೂ ಮಿಂಚುತ್ತಿದ್ದಾರೆ.
ಆದರೆ ಕಾಲ ಬದಲಾದಂತೆ ಶಿಕ್ಷಣದ ರೂಪವೇ ಬದಲಾಯಿತು. ಆಂಗ್ಲಮಾಧ್ಯಮ ಶಾಲೆಗಳ ಭರಾಟೆ ಹೆಚ್ಚಾಯಿತು. ಜೊತೆಗೆ ಹೆತ್ತವರೂ ಮಕ್ಕಳ ಶಿಕ್ಷಣವು ಖಾಸಗಿ ಶಾಲೆಗಳಲ್ಲಿ ಆಂಗ್ಲಮಾಧ್ಯಮದಲ್ಲಿ ನಡೆದರೆ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗುವುದು ಎಂಬ ತೀರ್ಮಾನಕ್ಕೆ ಬಂದು ಸರಕಾರಿ ಶಾಲೆಗಳನ್ನು ತಿರಸ್ಕರಿಸುವ ಹಂತಕ್ಕೆ ಬಂದರು. ಹೀಗಾಗಿ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗತೊಡಗಿತು.
ಅಂತೆಯೇ ಈ ಶಾಲೆಯಲ್ಲಿ ಕೂಡ ಕಳೆದು ೫ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕುಸಿತ ಕಂಡಿದ್ದು ಶಾಲೆಯು ಮುಚ್ಚುವ ಸ್ಥಿತಿಯಲ್ಲಿತ್ತು. ನಂತರ ಕಳೆದ ಮೂರು ವರ್ಷಗಳಿಂದ ಸರಕಾರದ ಆದೇಶದಂತೆ ಇದೇ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಕೆಜಿ, ಯುಕೆಜಿ – ಚಿಣ್ಣರ ಮನೆ ಆರಂಭಿಸಲಾಯಿತು. ೧ನೇ ತರಗತಿಯಿಂದ ೫ನೇ ತರಗತಿ ವರೆಗಿನ ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಪ್ರಮುಖವಾಗಿ ಸ್ಮಾರ್ಟ್ ಕ್ಲಾಸ್ ಮೂಲಕ ಕಲಿಸು ವ್ಯವಸ್ಥೆ ಮಾಡಲಾಯಿತು ಹಾಗೂ ೬ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಯನ್ನಾಗಿ ಆರಂಭಿಸಿ ಆಂಗ್ಲ ಮಾಧ್ಯಮಗಳ ಶಾಲೆಗಳಿಗೆ ಪೈಪೋಟಿಯಾಗಿ ನಿಂತಿತು. ಬ್ರಹ್ಮರಕೂಟ್ಲು, ತಲಪಾಡಿ, ಅಲೆತ್ತೂರು, ಕೈಕುಂಜೆ, ಮಯ್ಯರಬೈಲು, ಕಾಮಾಜೆ, ಮೊಡಂಕಾಪು, ಗೂಡಿನಬಳಿ ಹೀಗೆ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದು ಈಗ ಮಕ್ಕಳ ಸಂಖ್ಯೆ ಏರಿಕೆಯಾಗಿದೆ
ಬಿ.ಸಿ.ರೋಡು ನಗರದಿಂದಲೇ ಕಾಂಕ್ರೀಟೀಕೃತ ರಸ್ತೆಯನ್ನು ಹೊಂದಿರುವ ಈ ಸರಕಾರಿ ಶಾಲೆಯಲ್ಲಿ ನಗರದ ಯಾವುದೇ ವಾಹನಗಳ ಕಿರಿಕಿರಿ ಇಲ್ಲಿ ಇಲ್ಲ. ಸುತ್ತ ಮುತ್ತ ಮನೆಗಳ ನಡುವೆ ಎತ್ತರದಲ್ಲೊಂದು ಈ ಶಾಲೆ ನಿರ್ಮಿಸಿದ್ದು ಓದುವ ವಿದ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣ ಹೊಂದಿದೆ. ಬಂಟ್ವಾಳ ರೋಟರಿ ಕ್ಲಬ್ ಇದರ ಸಹಕಾರದಿಂದ ಶಾಲೆಯ ಗೌರವ ಶಿಕ್ಷಕಿಯರಿಗೆ ಗೌರವ ಧನ ನೀಡುತ್ತಾ ಇದೆ ಹಾಗೂ ಶಾಲೆಯ ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಿ ಪೈಂಟ್ ಬಳಿದು ಆಕರ್ಷಕಗೊಳಿಸಿದೆ. ಹಿಂದೂಸ್ತಾನ್ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಭಾಂಗಣಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಉತ್ತಮ ಶಿಕ್ಷಕರ ಬಳಗವನ್ನೂ ಹೊಂದಿದೆ. ವಿಶಾಲವಾದ ಮೈದಾನ ಹೊಂದಿದ್ದು ಅನೇಕ ಕ್ರೀಡಾಪಟುಗಳಿಗೂ ಈ ಶಾಲಾ ಮೈದಾನವೇ ವರದಾನವಾಗಿದೆ. ಈ ಶಾಲೆಯ ಬಳಿಯೇ ಸರಕಾರಿ ಪ್ರೌಢ ಶಾಲೆಯೂ ಇದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭಾಸಕ್ಕೆ ದೂರದ ಶಾಲೆಯನ್ನು ಅವಲಂಬಿಸುವ ಪ್ರಸಂಗವೂ ಬರುವುದಿಲ್ಲ.
ಆದರೂ ಶಾಲೆಯಲ್ಲಿ ಇನ್ನೂ ಅಭಿವೃದ್ಧಿ ಪೂರಕವಾದ ಅನುದಾನಗಳ ಅಗತ್ಯವೂ ಇದೆ. ಶಾಲಾ ಮೈದಾನವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದು ಮತ್ತು ಅದರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸುವುದು, ಶಾಲಾ ಅಂಗಳಕ್ಕೆ ಇಂಟರ್ಲಾಕ್ ಅಳವಡಿಸುವುದು, ಶಾಲೆಯ ಮಾಡಿನ ದುರಸ್ಥಿಯ ಅಗತ್ಯವಿದೆ. ಶಾಲೆಗೆ ಸಮರ್ಪಕವಾದ ರಂಗಮಂದಿರ ನಿರ್ಮಾಣ, ಶಾಲಾ ಲೈಬ್ರೇರಿ ಕೊಠಡಿ ನಿರ್ಮಾಣ, ಮಕ್ಕಳಿಗೆ ನೂತನ ಶೌಚಾಲಯಗಳ ನಿರ್ಮಾಣ ಹಾಗೂ ಮೂರು ಗೌರವ ಶಿಕ್ಷಕರುಗಳಿಗೆ ವಾರ್ಷಿಕ ಗೌರವ ಧನ ವ್ಯವಸ್ಥೆಯೂ ಅಗತ್ಯ ಇದೆ. ಒಟ್ಟಿನಲ್ಲಿ ‘ಬಲೇ ಚಾಪರ್ಕ’ ವಿನೂತನ ಕಾರ್ಯಕ್ರಮವು ಶಾಲಾಭಿವೃದ್ಧಿಗೆ ಪೂರಕವಾದ ಯೋಜನೆಗೆ ಸಹಕಾರಿಯಗಲಿ.
****
ನಾವು ಕಲಿತ ಶಾಲೆಯನ್ನು ತುಂಬ ವರ್ಷಗಳಾದ ಬಳಿಕ ಮತ್ತೊಮ್ಮೆ ನೋಡಿದಾಗ ನಮಗೆ ಹಿಂದೆ ನಾವು ಶಾಲೆಯಲ್ಲಿ ಕಳೆದ ದಿನಗಳೆಲ್ಲವೂ ನೆನಪಿಗೆ ಬರುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ಹಾಗಾಗಿ ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಾರೆ ಎನ್ನುವ ಮಾತು ನಿಜ. ಸರಕಾರಿ ಪ್ರಾಥಮಿಕ ಶಾಲೆ ಬಿ.ಮೂಡದವರು ನನ್ನದೇ ನಾಟಕ ಬಲೇ ಚಾ ಪರ್ಕದ ಶೀರ್ಷಿಕೆಯನ್ನಿತ್ತು ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಶಾಲೆ ಇನ್ನಷ್ಟು ಬೆಳೆಯಲಿ ಎನ್ನುವುದೇ ನಮ್ಮ ಹಾರೈಕೆ
ದೇವದಾಸ್ ಕಾಪಿಕಾಡ್, ನಟ, ನಿರ್ದೇಶಕ ತುಳು ಚಲನಚಿತ್ರ ಹಾಗೂ ರಂಗಭೂಮಿ
**********************
ಶತಮಾನದತ್ತ ಸಾಗುತ್ತಿರುವ ಅಜ್ಜಿಬೆಟ್ಟುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಇಲ್ಲ. ಬಿ.ಸಿ.ರೋಡು ನಗರದಿಂದಲೇ ಕಾಂಕ್ರೀಟ್ ರಸ್ತೆ, ವಿಶಾಲವಾದ ಶಾಲಾ ಮೈದಾನ, ನುರಿತ ಶಿಕ್ಷಕರು, ಉತ್ತಮ ದರ್ಜೆಯ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದು ಭಾರತದ ಉತ್ತಮ ಪ್ರಜೆಯಾಗಿ ಬಾಳುತ್ತಿದ್ದಾರೆ. ಸರಕಾರಿ ಶಾಲಾ ಆಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳೇ ಜೀವಾಳ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳೆವಿದ್ಯಾರ್ಥಿಗಳು ಬಂದು ‘ಬಲೇ ಚಾ ಪರ್ಕ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ..
ಡಾ. ರಮೇಶಾನಂದ ಸೋಮಯಾಜಿ. ಹಳೇ ವಿದ್ಯಾರ್ಥಿ, ಗೌರವಾಧ್ಯಕ್ಷರು, ಸ.ಹಿ.ಪ್ರಾ.ಶಾಲೆ ಬಿ.ಮೂಡ
*********
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಮುಚ್ಚುವ ಸ್ಥಿತಿಯಲ್ಲಿದ್ದ ನಮ್ಮ ಶಾಲೆಗೆ ಈಗ ಸ್ಥಳೀಯ ಸಹಕಾರ ಹಾಗೂ ಸ್ಥಳೀಯ ಸಂಘ-ಸಂಸ್ಥೆಯ ನೆರವಿನಿಂದ ಮತ್ತೆ ಮರುಜೀವ ಬಂದಂತಾಗಿದೆ. ಆದರೂ ಇನ್ನೂ ಅನೇಕ ಅಭಿವೃದ್ಧಿಗೆ ಆಗಬೇಕಾಗಿದೆ. ಹಳೆ ವಿದ್ಯಾರ್ಥಿಗಳೇ ಸರಕಾರಿ ಶಾಲೆಯ ಜೀವಾಳ. ಅವರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಇನ್ನೂ ಸಹಕಾರಿಯಾಗಲಿ.
– ಶ್ರೀಧರ ಅಮೀನ್, ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ