ವಿಟ್ಲ: ಅನಂತಾಡಿ ಬಾಕಿಲಗುತ್ತು ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಬೆರ್ಮೆರ್ ಬೈದೇರುಗಳು ಹಾಗೂ ಇತರ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಶ್ರೀ ಕ್ಷೇತ್ರದಲ್ಲಿ ಪ್ರಾತಃ ಕಾಲ ಗಣಪತಿ ಹವನದ ಬಳಿಕ ಮುಂಜಾನೆ 7.50 ಸುಮೂಹೂರ್ತದಿಂದ 11.30 ರ ತನಕ ಕುಂಭ ಲಗ್ನ ಹಾಗೂ ಮೀನ ಲಗ್ನದಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠೆ, ರಕ್ತೇಶ್ವರಿ, ಉಳ್ಳಾಲ್ತಿ, ಹೊಸಮ್ಮ, ವೈದ್ಯನಾಥೇಶ್ವರ ಸಾನ್ನಿಧ್ಯಗಳ ಪ್ರತಿಷ್ಠಾಪನೆ, ಕಲಶಾಭಿಷೇಕ ಹಾಗೂ ಎಲ್ಲಾ ಪರಿವಾರ ದೈವಗಳ ಪ್ರತಿಷ್ಠೆ, ನಾಗದೇವರ, ಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾ ಪೂಜೆ, ಮಹಾಪೂಜೆ ನಡೆಯಲಿದೆ.
ಬ್ರಹ್ಮ ಬೈದೇರುಗಳ ಗರೋಡಿಯಲ್ಲಿ ಪ್ರಾತಃಕಾಲ 3.30 ರ ಬ್ರಾಹ್ಮೀ ಮುಹೂರ್ತದಲ್ಲಿ ಆರಂಭಗೊಂಡು ಕುಂಭ ಸ್ಥಾಪನೆ, ಕುಂಭ ಪೂಜೆ, ಆದ್ಯ ಗಣಯಾಗ, ಶಿಖರ ಪ್ರತಿಷ್ಠೆಯ ಬಳಿಕ ಮುಂಜಾನೆ 9.37 ರ ಮೀನ ಲಗ್ನದ ಸುಮುಹೂರ್ತದಲ್ಲಿ ಬೆರ್ಮೆರ್ ಬೈದೇರುಗಳ ಹಾಗೂ ದೇರಬೈದ್ಯ ಗುರುಪೀಠ ಪ್ರತಿಷ್ಠೆ, ಪ್ರತಿಷ್ಠಾ ಹೋಮ ನಡೆಯಲಿದೆ.
108 ಕಲಶಗಳ ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಮಹಾ ಮಂತ್ರಾಕ್ಷತೆಯ ಬಳಿಕ ಮಧ್ಯಾಹ್ನ 12.30 ಕ್ಕೆ ಬೈದೇರುಗಳ ದರ್ಶನ ನಡೆಯಲಿದೆ.
ಸಂಜೆ ಶ್ರೀ ವೈದ್ಯನಾಥೇಶ್ವರ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ಕಲಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಉಳ್ಳಾಲ್ತಿ, ಹೊಸಮ್ಮ ಸನ್ನಿಧಿಯಲ್ಲಿ ಕಲಶಪೂಜೆ, ಸಪ್ತಶತೀ ಪಾರಾಯಣ ಸಮಾಪ್ತಿಯಾಗಲಿದೆ.
ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾನ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಚಿತ್ತರಂಜನ್ ಕಂಕನಾಡಿ ಅಧ್ಯಕ್ಷತೆ ವಹಿಸಲಿದ್ದು, ನಾನಾ ಕ್ಷೇತ್ರಗಳ ಗಣ್ಯ, ಮಹನೀಯರು ಭಾಗವಹಿಸಲಿದ್ದಾರೆ.
