ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಶ್ರೀರಾಮ ಪದವಿ ಕಾಲೇಜು – ರೆಡ್ ಕ್ರಾಸ್ ಘಟಕವು ಕೆ.ಎಸ್.ಹೆಗಡೆ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಎಪ್ರಿಲ್ 30ರಂದು ಬೆಳಗ್ಗೆ 9.30ರಿಂದ ಮಧ್ಯಾನ 1ರ ವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿದೆ.


ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಬೇಕಾಗಿರುವುದರಿಂದ ನಂತರದ 2-3 ತಿಂಗಳು ರಕ್ತದಾನಕ್ಕೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಆಸಕ್ತರು ಅಂದು ನೇರವಾಗಿ ವಿದ್ಯಾಕೇಂದ್ರದ ಪದವಿ ಕಾಲೇಜಿನ ಆವರಣದಲ್ಲಿ ಬಂದು ನೇರವಾಗಿ ನೋಂದಣಿ ಮಾಡಿ ರಕ್ತದಾನ ಮಾಡಿ ಪ್ರಮಾಣ ಪತ್ರ ಪಡೆಯಬಹುದು.
ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಹಾಗೂ ರಕ್ತದಾನ ಬಳಿಕ ತೆರಳುವವರಿಗೆ ಅನುಮತಿ ಪತ್ರ ನೀಡಲಾಗುವುದು. ರಕ್ತದಾನ ಮಾಡುವವರು 10 ಗಂಟೆ ಮೊದಲೇ ಕೇಂದ್ರವನ್ನು ತಲುಪಬೇಕು. ವಿದ್ಯಾಕೇಂದ್ರವು ಹಲವಾರು ಸಮಾಜಮುಖೀ ಕೆಲಸಗಳನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು, ಇದೀಗ ಲಾಕ್ದೌನ್ ಸಂದರ್ಭದಲ್ಲಿ ಸರಕಾರದ, ಇಲಾಖೆಯ ಅನುಮತಿಯೊಂದಿಗೆ ಈ ಚಟುವಟಿಕೆ ಹಮ್ಮಿಕೊಂಡಿದೆ ಎಂದು ವಿದ್ಯಾಸಂಸ್ಥೆಯ ಸಂಚಾಲಕರ ಪ್ರಕಟಣೆ ತಿಳಿಸಿದೆ.












