ಬಂಟ್ವಾಳ: ಹೆಚ್ಚುತ್ತಿರುವ ಕೊರೋನ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ವಾರಾಂತ್ಯ ಕರ್ಫ್ಯೂ ದಿನವಾದ ಶನಿವಾರ ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ಬಂಟ್ವಾಳ ತಾಲೂಕು ಸಂಪೂರ್ಣ ಸ್ತಬ್ದಗೊಂಡಿದೆ.

ಸದಾ ಜನಜಂಗುಳಿಯಿಂದ ತುಳುಕುತ್ತಿರುವ ಇಡೀ ತಾಲೂಕಿನ ಕೇಂದ್ರ ಸ್ಥಾನ, ಪ್ರಮುಖ ವ್ಯಾಪಾರ, ವ್ಯಾವಹಾರಿಕ ಕೇಂದ್ರ, ಮಿನಿವಿಧಾನ ಸೌಧ, ನ್ಯಾಯಾಲಯ, ಪೊಲೀಸ್ ಠಾಣೆ, ಶಾಸಕರ ಕಚೇರಿ ಸಹಿತ ಸರಕಾರಿ ಹಾಗೂ ವಿವಿಧ ಖಾಸಗಿ ಕಚೇರಿಗಳನ್ನು ಹೊಂದಿರುವ ಬಿ.ಸಿ.ರೋಡ್ 11 ಗಂಟೆಯ ಬಳಿಕ ಬಿಕೋ ಎನ್ನುತ್ತಿದೆ.
ವಾರಾಂತ್ಯ ಕರ್ಫ್ಯೂಗೆ ಬಂಟ್ವಾಳ ತಾಲೂಕಿನಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ತಾಲೂಕಿನ ಮಾಣಿ, ಕಲ್ಲಡ್ಕ, ವಿಟ್ಲ, ಮೆಲ್ಕಾರ್, ಪಾಣೆಮಂಗಳೂರು, ತುಂಬೆ, ಫರಂಗಿಪೇಟೆ, ಸಿದ್ದಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಬೆಳಗ್ಗೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು 11 ಗಂಟೆ ಆಗುತ್ತಿದ್ದಂತೆ ಬಂದ್ ಮಾಡಿ ವ್ಯಾಪಾರಿಗಳು ಮನೆ ಸೇರಿದ್ದಾರೆ.
ತಾಲೂಕಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಬೆಳಗ್ಗೆಯಿಂದ ತೀರ ವಿರಳವಾಗಿದ್ದ ವಾಹನ ಸಂಚಾರವೂ 11 ಗಂಟೆಯಾಗುತ್ತಿದ್ದಂತೆ ಸಂಪೂರ್ಣ ಸ್ಥಗಿತಗೊಂಡಿದೆ. ತಾಲೂಕಿನ ವಿವಿಧೆಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.



