ಬಂಟ್ವಾಳ: ಡಾಂಬರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಬಂಧಿಸಿದ್ದಾರೆ.ಪುತ್ತೂರು ಸಮೀಪದ ಆದರ್ಶನಗರದ ನೆಕ್ಕಿಲಾಡಿ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಉಮ್ಮರುಲ್ ಫಾರೂಕ್ ಮತ್ತು ವಿಟ್ಲ ಕಸ್ಬ ಮೇಗಿನಪೇಟೆ ತಾಜುದ್ದೀನ್ ಅವರ ಪುತ್ರ ಮಹಮ್ಮದ್ ಆಶ್ರಫ್ ಬಂಧಿತ ಆರೋಪಿಗಳು.


ಪ್ರಕರದ ಹಿನ್ನೆಲೆ: ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ರಸ್ತೆ ಡಾಮರೀಕರಣಕ್ಕೆಂದು ದಾಸ್ತಾನು ಇರಿಸಲಾಗಿದ್ದ ಸುಮಾರು 3.5 ಲಕ್ಷ ಮೌಲ್ಯದ ಡಾಂಬರು ಡಬ್ಬಿಗಳನ್ನು 2017 ರ ಡಿಸೆಂಬರ್ ತಿಂಗಳನಲ್ಲಿ ಕಳವು ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಚರಣೆ ಮಾಡಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಎರಡು ಜನ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಉಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಮೂವರು ಆರೋಪಿಗಳು ಬಾಕಿಯಾಗಿದ್ದು ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.ಎಸ್.ಪಿ.ರವಿಕಾಂತೇ ಗೌಡ ನಿರ್ದೇಶನ ದಂತೆ ಹೆಚ್ಚುವರಿ ಪೋಲೀಸ್ ಅಧೀಕ್ಷರಾದ ಸಜಿತ್ ವಿ.ಜೆ. ಹಾಗೂ ಬಂಟ್ವಾಳ ಉಪವಿಭಾಗದ ಸಹಾಯ ಕ ಪೋಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ ಮಾರ್ಗದರ್ಶನದಲ್ಲಿ ಬಂಟ್ವಾಳ ಸಿ.ಐ. ಟಿ.ಡಿ.ನಾಗರಾಜ್ ಮತ್ತು ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕರಾದ ಪ್ರಸನ್ನ, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ. ಹರೀಶ್ ಎಂ.ಆರ್.ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.