ಆರ್ಥಿಕ ಪುನಃಶ್ಚೇತನ ಯಾಕೆ ಅಸಾಧ್ಯ? ಸಾಧ್ಯಾಸಾಧ್ಯತೆಗಳ ನಿರ್ಣಯ ನಮ್ಮದೆ ತಾನೆ? ಯೋಚಿಸಿ, ನಮ್ಮ ಮನೆಯೊಳಗಿರುವ ವಸ್ತುಗಳನ್ನೇ ಲೆಕ್ಕಹಾಕೋಣ; ಅವುಗಳನ್ನು ಅಗತ್ಯ ವಸ್ತುಗಳು(Needs) ಮತ್ತು ಆಶೆಪಡುವ ವಸ್ತುಗಳು(wants)(ಪ್ರೈಮರಿ ಮತ್ತು ಸೆಕೆಂಡರಿ?)ಅಡಿಯಲ್ಲಿ ಸೇರಿಸಿ ಲೆಕ್ಕಮಾಡುವ. ಇದರ ಜತೆಯಲ್ಲಿ ನಿತ್ಯೋಪಯೋಗಿ ಅಲ್ಲದ ವಸ್ತುಗಳನ್ನೂ ಸೇರಿಸುವ. ಈಗ ನಮ್ಮ ಮನೆಯಲ್ಲಿ ಯಾವ ವಸ್ತುಗಳು ಅಧಿಕವಾಗಿ ತುಂಬಿಕೊಂಡಿವೆ? ಯೋಚಿಸುವ ಅಷ್ಟೆ. ಇನ್ನು ಶ್ರಮ ಬೇಡದ ಹಾಗೂ ಅನಿವಾರ್ಯವಲ್ಲದ ಮತ್ತು ಯಾಂತ್ರೀಕೃತ ಬದುಕಿಗೆ ನಮ್ಮನ್ನು ತಳ್ಳುವ ಡಿಶ್ ವಾಶರ್, ಕಾಫಿ ಮೇಕರ್, ವ್ಯಾಕ್ಯುಮ್ ಕ್ಲೀನರ್, ವಾಶಿಂಗ್ ಮೆಶಿನ್ ಇತ್ಯಾದಿಗಳಿಲ್ಲದೆಯೇ ಸಂಬಂಧಿತ ಕಾರ್ಯ ನಿರ್ವಹಣೆ ಸಾಧ್ಯ ಇಲ್ವೆ?
ನಮ್ಮ ಖರ್ಚುವೆಚ್ಚ ನಮ್ಮ ಸಂತೋಷಕ್ಕಿರಲಿ, ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಬೇಡ ಅಥವಾ ನಮ್ಮ ಶ್ರೀಮಂತಿಕೆಯ ಪ್ರದರ್ಶನಕ್ಕೆಂದಾದರೆ ಮೊದಲನೆಯದಾಗಿ ಇದು ದುಂದುವೆಚ್ಚ ಎರಡನೆಯದಾಗಿ ಪರೋಕ್ಷವಾಗಿ ಬಡವರು ಹಾಗೂ ಮಧ್ಯಮವರ್ಗದವರ ಮೇಲೆ ಒತ್ತಡ; ಇದೂ ಬೇಡ. ಇಲ್ಲಿ ನಮಗೆ ಕನಿಷ್ಠ ಶೇಕಡಾ 65 ಪಾಲು ಆರ್ಥಿಕ ಉಳಿತಾಯ ಪರೋಕ್ಷವಾಗಿ ಸಮಾಜಕ್ಕೂ ಕೂಡಾ.
ಅಗತ್ಯ ವಸ್ತುಗಳಾದ ಶುಂಠಿ, ಅರಶಿನ, ಕಾಳುಮೆಣಸು, ಹಸಿ ಮೆಣಸು, ಟೊಮೆಟೊ,ಅನಾನಸ್, ಮಾವಿನಹಣ್ಣು, ಪೇರಳೆ, ಚಿಕ್ಕು, ಬಸಳೆ ಮತ್ತು ಇತರೇ ತರಕಾರಿಗಳು ಇತ್ಯಾದಿಗಳನ್ನು ನಮಗಿರುವ ಜಾಗದ ಇತಿಮಿತಿಯಲ್ಲಿ ನಾವೇ ಬೆಳೆಸಬಹುದು. ಗಾಂಧೀ ತತ್ವದಂತೆ ನಮ್ಮ ಕೆಲಸ ನಾವೇ ಮಾಡುವ. ಇವೆಲ್ಲವುಗಳಿಂದ ನಮಗೆ ಶಕ್ತಿ ಸಂಚಯವಾಗುತ್ತದೆ ಜತೆಯಲ್ಲಿ ಕೌಶಲ್ಯತೆ ಕೂಡ; ಅದಕ್ಕಿಂತಲೂ ಹೆಚ್ಚಾಗಿ ಆತ್ಮ ಸ್ಥೈರ್ಯ ವೃದ್ಧಿಸುತ್ತದೆ, ಸ್ವಾವಲಂಬಿಗಳಾಗುತ್ತೇವೆ, ಪ್ರಕೃತ ಬೇಕಾಗಿರುವುದೇ ಇದು. ಇದು ಆತ್ಮ ನಿರ್ಭರತ್ವಕ್ಕೆ ದಾರಿ.

ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ. 🙏

ರಾಜಮಣಿ ರಾಮಕುಂಜ

