ರಮೇಶ್.ಕೆ ಪುಣಚ, ವಿಟ್ಲ

ಒಂದು ಊರಿನ ಹೃದಯ ಭಾಗದಂತಿರುವ ದೇಗುಲದ ಜೀರ್ಣೋದ್ಧಾರ ಕಾರ್ಯ ಆ ಊರಿನ ಪ್ರವರ್ಧಮಾನತೆಗೆ ಕಾರಣವಾಗುತ್ತದೆ ಎಂದು ಬಲ್ಲವರ ನಂಬಿಕೆಯಾಗಿದೆ. ಪುರಾತನ ದೇವಾಲಯಗಳನ್ನು ಹಿಂದಿನ ಶಿಷ್ಟಾಚಾರ , ಸಂಪ್ರದಾಯ, ನಿಯಮಗಳಿಗೆ ಎಳ್ಳಷ್ಟೂ ಚ್ಯುತಿ ಬರದಂತೆ ಜೀರ್ಣೋದ್ಧಾರ, ಪುನರ್ ನಿರ್ಮಾಣಗೊಳಿಸಿ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮಾಡುವುದು ಧಾರ್ಮಿಕ ಹಾಗೂ ಸಾಮಾಜಿಕವಾದ ಮಹಾ ಕಾರ್ಯವೆನಿಸಿದೆ. ಅದರಲ್ಲಿಯೂ ಜೀರ್ಣೋಧ್ಧಾರ ಕಾರ್ಯಗಳು ಕೇವಲ ದೇಗುಲವನ್ನು ಕೇಂದ್ರೀಕರಿಸಿ ಮಾತ್ರ ನಡೆಯುತ್ತದೆ. ಆದರೆ ಊರಿನ ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ದೇಗುಲದೊಂದಿಗೆ ಊರನ್ನೂ ಸಹ ಜೀರ್ಣೋದ್ಧಾರಗೊಳಿಸುವ ಮಹತ್ಕಾರ್ಯವೊಂದು ವಿಟ್ಲಮೂಡ್ನೂರು ಹಾಗೂ ಕುಳ ಗ್ರಾಮ ವ್ಯಾಪ್ತಿಗೊಳಪಡುವ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇಗುಲ ಹಾಗೂ ಶಿಬರಿಕಲ್ಲುಮಾಡ ಶ್ರೀ ಮಲರಾಯ ಮೂವರು ದೈವಂಗಳ ಜೀರ್ಣೋದ್ಧಾರದ ಮೂಲಕ ನಡೆಯುತ್ತಿರುವುದು ಧಾರ್ಮಿಕ ಕ್ಷೇತ್ರದಲ್ಲೊಂದು ಹೊಸ ಇತಿಹಾಸಕ್ಕೆ ನಾಂದಿಯಾಡಿದೆ.
ದೇಗುಲ ವೃದ್ಧಿ-ಗ್ರಾಮ ಸಮೃದ್ಧಿ: ಶತಶತಮಾನಗಳಷ್ಟು ಪುರಾತನ ಇತಿಹಾಸ ಹೊಂದಿರುವ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ದೇಗುಲ ಕುಳ ಗ್ರಾಮಕ್ಕೊಳಪಟ್ಟಿದ್ದರೆ, ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರು ದೈವಂಗಳು ವಿಟ್ಲಮೂಡ್ನೂರು ಗ್ರಾಮ ವ್ಯಾಪ್ತಿಗೆ ಸೇರಿದೆ. ಈ ಎರಡೂ ಗ್ರಾಮಗಳ 1260 ಹಿಂದೂ ಧರ್ಮಿಯರ ಮನೆಗಳ ಸಹಕಾರದಲ್ಲಿ ಸುಮಾರು 2.5 ಕೋ.ಗಿಂತಲೂ ಅಧಿಕ ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರ ಹಾಗೂ ದೈವಸ್ಥಾನಮಾಡಗಳ ಜೀರ್ಣೋಧ್ಧಾರ ನಡೆಯುತ್ತಿದೆ. ವಿಶೇಷವೆಂದರೆ ಈ ಜೀರ್ಣೋದ್ಧಾರ ಕಾರ್ಯಕ್ಕೆ ಹೊರಗಿನಿಂದ ಯಾವುದೇ ವೈಕ್ತಿಕ ಹಗೂ ಸಂಘಸಂಸ್ಥೆಗಳ ದೇಣಿಗೆಯನ್ನು ಪಡೆಯದೇ ಈ ಮನೆಗಳ ಭಕ್ತರ ದೇಣಿಗೆ ಸಹಕಾರದಿಂದಲೇ ನಡೆದಿದೆ.! ಇದು ಸಹ ದೇಗುಲ ಜೀರ್ಣೋದ್ಧಾರದ ಇತಿಹಾಸದಲ್ಲಿ ಬಹುಃ ಚೊಚ್ಚಲ ಚಿಂತನೆಯಾಗಿದ್ದು, ಯಶಸ್ವಿಯಾಗಿದೆ. ಫೆ. 5ರಿಂದ ಆರಂಭಗೊಂಡು ಬ್ರಹ್ಮಕಲಶೋತ್ಸವ ಕಾರ್ಯದ ಖರ್ಚಿಗಾಗಿ ಮಾತ್ರ ಪರವೂರ ಭಕ್ತರ ಸಹಕಾರ ಅಪೇಕ್ಷಿಸಲಾಗಿದೆ.
ಸಾನ್ನಿಧ್ಯಗಳು ಬೆಳಗುವುದರೊಂದಿಗೆ ಊರು ಬೆಳಗುವುದು ಸಹ 2600 ಮನೆಗಳವರಿಗೆ ಸಂಕಲ್ಪವಾಗಿದೆ. ಗ್ರಾಮ ಸಮೃದ್ಧಿಗಾಗಿ ಮಣ್ಣನ್ನು ಹಸಿರಾಗಿಸುವ ಯೋಜನೆ ಅತ್ಯಂತ ಪ್ರಮುಖವೆನಿಸಿದೆ. ಎಲ್ಲಿ ಬಂಜರು ಭೂಮಿಗಳಿವೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಗದ್ದೆಗಳನ್ನು ಅಭಿವೃದ್ಧಿಪಡಿಸುವುದು. ಆಹಾರ ಉತ್ಪನ್ನಗಳನ್ನು ಹೆಚ್ಚೆಚ್ಚು ಬೆಳೆಸಲು ಸೂಕ್ತ ಮಾರ್ಗದರ್ಶನ, ವಿದ್ಯುತ್ ಸಂಪರ್ಕವಿಲ್ಲದ ಕಡೆ ವಿದ್ಯುತ್ ಸಂಪರ್ಕಕ್ಕೆ ಸಹಕಾರ, ಒಟ್ಟಿಗೆ ಸೌರ ವಿದ್ಯುತ್ ಸಂಪರ್ಕಕ್ಕೆ ಉತ್ತೇಜನ, ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವ, ಆರೋಗ್ಯ ಕಾಪಡಿಕೊಳ್ಳುವ ಮಾಹಿತಿ, ಶೈಕ್ಷಣಿಕ ಸದೃಢತೆಗೆ ಪ್ರೋತ್ಸಾಹ, ಜಲ ಸಂರ್ವರ್ಧನೆ, ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು, ಇಂಗು ಗುಂಡಿಗಳ ರಚನೆಗಳಿಗೆ ಒತ್ತು ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ಎಲ್ಲಾ ರೀತಿಯ ಚಿಂತನೆಗಳು ಕಾರ್ಯರೂಪಕ್ಕೆ ಬರುತ್ತಿದ್ದು, ಜೀರ್ಣೋದ್ಧಾರ ಮಂಡಳಿ, ಐದು ಮನೆತನಗಳ ಗುರಿಕ್ಕಾರರು, ಹಿರಿಯರು, ಧಾರ್ಮಿಕ ಶ್ರದ್ಧಾಳುಗಳು, ಊರಿನ ಹಿತೈಷಿಗಳು ಸೇರಿ ನಿರ್ಣಯಿಸಿದ ವಿಚಾರಗಳು ಯಶಪ್ರದವೆನಿಸಿದೆ.
ಒಟ್ಟಂದದಲ್ಲಿ ಊರಿನ ಶ್ರದ್ಧಾಕೇಂದ್ರಗಳು ಉದ್ಧಾರ ಆಗುವ ಹಾಗೆ ಗ್ರಾಮವೂ ಆಹಾರ – ನೀರು – ಬೆಳಕಿನಲ್ಲಿ ಸ್ವಾವಲಂಬನೆಯನ್ನು ಕಾಯ್ದುಕೊಳ್ಳಬೇಕು. ಜನರಿಗೆ ಅವಶ್ಯಕವಾಗಿರುವ ಮೂಲ ಸೌಕರ್ಯಗಳು ಈಡೇರಬೇಕು. ಗ್ರಾಮಗಳ ಆರ್ಥಿಕತೆ ಏರುಗತಿಯಲ್ಲಿ ಸಾಗಬೇಕೆಂಬ ಚಿಂತನೆ ಸಾಕಾರಗೊಳ್ಳುತ್ತಿದೆ. ಈ ಮೂಲಕ ಗ್ರಾಮ ಸಮಗ್ರವಾಗಿ ಸಮೃದ್ಧಿ ಹೊಂದಬೇಕೆಂಬ ಕನಸೊಂದು ಸಾಕಾರದತ್ತ ಸಾಗುತ್ತಿದೆ.
ಈಗಾಗಲೇ ಪಾಳು ಬಿದ್ದ ಗದ್ದೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಗೆ ಮುಂದಾಗಲಾಗಿದ್ದು, ಮೂರು ವರ್ಷಗಳಿಂದ ಗದ್ದೆ ಬೇಸಾಯ ನಡೆಸಲಾಗುತ್ತಿದೆ. ಮೊದಲ ಎರಡು ವರ್ಷ ಸುಮಾರು 5 ಎಕರೆ ಜಾಗದಲ್ಲಿ ಬೇಸಾಯ ನಡೆದರೆ ಈ ವರ್ಷ 7 ಎಕರೆ ಜಾಗದಲ್ಲಿ ಬೇಸಾಯ ಮಾಡಲಾಗಿದೆ. ಸುಮಾರು 1000 ಕ್ವಿಂಟಾಲ್ ಭತ್ತವನ್ನು ಊರಿನವರ ಸಹಕಾರದಲ್ಲೇ ಬೆಳೆಸಲಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಸೇರಿ ದಿನ ನಿತ್ಯ ಬಳಕೆಯ ಆಹಾರವನ್ನು ಬೆಳೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಎರಡು ವರ್ಷದಿಂದ ಗ್ರಾಮದಲ್ಲಿ ಹರಿಯುವ ತೊರೆಗಳಿಗೆ ಸುಮಾರು 40 ಕಿಂಡಿ ಅಣೆಕಟ್ಟು ಅವನ್ನು ಕಟ್ಟುವ ಮೂಲಕ ನೀರಿನ ಸಂಗ್ರಹ ಮಾಡುವ ಕಾರ್ಯಕ್ಕೆ ಕೈಜೋಡಿಸಲಾಗಿದೆ. ಪಂಚಾಯಿತಿ ನೆರವಿನ ಕಿಂಡಿ ಅಣೆಕಟ್ಟು, ಮರಳು ಮಣ್ಣಿನ ಅಣೆಕಟ್ಟುಗಳನ್ನು ಮಾಡಲಾಗಿದೆ. ಮಳೆ ನೀರಿನ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ದೇವಾಲಯದ ಬಳಿಯಲ್ಲಿ ಸುಮಾರು 1 ಲಕ್ಷ ಲೀ. ಸಾಮರ್ಥ್ಯದ ಸಂಪು ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಇದೇ ರೀತಿಯಲ್ಲಿ ಊರಿನ ಮನೆ ಮನೆಗೆ ವಿಸ್ತರಿಸುವ ಆಲೋಚನೆ ಸಮಿತಿಗೆ ಇದೆ.
ವಿದ್ಯುತ್ತನ್ನೇ ಆಶ್ರಯಿಸುವ ಬದಲಾಗಿದೆ ಬೆಳಕಿನಲ್ಲಿ ಸ್ವಾವಲಂಬನೆಯನ್ನು ಸಾಧಿಸಬೇಕೆಂಬ ನಿಟ್ಟಿನಲ್ಲಿ ಈ ಗ್ರಾಮಗಳಲ್ಲಿ ಸೌರ ಶಕ್ತಿಯನ್ನು ಮನೆಗಳಲ್ಲಿ ಬಳಸಬೇಕೆಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೂ ಎರಡು ಸೋಲಾರ್ ದೀಪವನ್ನು ವಿತರಿಸಿ ಬೆಳಕಿನಲ್ಲೂ ಸ್ವಾವಲಂಬನೆಯನ್ನು ಸಾಧಿಸುವ ಆಲೋಚನೆಯಲ್ಲಿ ಗ್ರಾಮಸ್ಥರಿದ್ದಾರೆ.
ತಾವೇ ಬೆಳೆದ ಕೃಷಿ ಉತ್ಪನ್ನಗಳೇ ಹೊರೆಕಾಣಿಕೆಯಾಗಿ ಸಮರ್ಪಣೆ!
ದೇವಾಲಯದ ಬ್ರಹ್ಮಕಲಶೋತ್ಸವ ಎಂದಾಕ್ಷಣ ಹೊರೆಕಾಣಿಕೆ ಸಮರ್ಪಣೆ ಸರ್ವೇ ಸಾಮಾನ್ಯವಾದದ್ದು. ಮುಂದಿನ ತಿಂಗಳು ನಡೆಯುವ ಕುಂಡಡ್ಕ ದೇವಸ್ಥಾನದ ಬ್ರಹ್ಮಲಶೋತ್ಸವದಲ್ಲಿ ಗ್ರಾಮದಿಂದ ಬರುವ ಹೊರೆ ಕಾಣಿಕೆ ಮಾತ್ರ ವಿಶಿಷ್ಟವಾಗಿದೆ. ಪ್ರತಿ ಮನೆಯಲ್ಲಿ ತಾವೇ ಬೆಳೆದ ತರಕಾರಿಯನ್ನು ಹೊರೆಕಾಣಿಕೆಯ ಮೂಲಕ ಸಮರ್ಪಣೆ ಮಾಡುವ ಯೋಜನೆಯನ್ನು ಸಮಿತಿಯ ವತಿಯಿಂದ ಹಾಕಿಕೊಳ್ಳಲಾಗಿದೆ. ಈ ಮೂಲಕ ಗ್ರಾಮದಲ್ಲಿ ಆಹಾರದ ಸ್ವಾವಲಂಬನೆಯನ್ನು ಸಾಧಿಸುವ ಪ್ರಥಮ ಹಾದಿಯನ್ನು ಹಾಕಲಾಗಿದೆ. ಆಗಾಗ ದೇಗುಲದಲ್ಲಿ ನಡೆಯುವ ಸಭೆಗಳಲ್ಲಿ ಗ್ರಾಮಾಭಿವೃದ್ಧಿಯ ಪ್ರತಿಯೊಂದು ಹಂತಗಳನ್ನು ತಿಳಿಸಿ ಅವರಿಂದ ಸಲಹೆಸೂಚನೆಗಳನ್ನು ಸ್ವೀಕರಿಸಲಾಗುತ್ತಿದೆ. ಸುಮಾರು 300 ಕ್ಕಿಂತಲೂ ಹೆಚ್ಚು ಜನರು ಒಟ್ಟಾಗಿ ಸೇರಿ ಒಂದೊಂದೇ ದಿನಗಳಲ್ಲಿ ಎರಡೆರಡು ಗ್ರಾಮಗಳಿಗೆ ಹಂಚಿರುವುದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಹಂಚಿರುವುದು ಅಚ್ಚರಿಯೆನಿಸಿದೆ. ಇದರೊಂದಿಗೆ ದ.ಕ ಜಿಲ್ಲೆಯಾದ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಭಕ್ತರನ್ನು ಒಟ್ಟುಗೂಡಿಸಿ ಗ್ರಾಮ ಸಮೃದ್ಧಿ ಯೋಜನೆಯ ಬಗ್ಗೆ ವಿಚಾರವಿನಿಮಯ ನಡೆಸಲಾಗುತ್ತಿದೆ.
…….
ದೇಗುಲ ಜೀರ್ಣೋದ್ಧಾರದ ಬಳಿಕ ದೇಗುಲದೊಂದಿಗೆ ಮಾತ್ರ ಸಂಬಂಧವಿರುವ ಭಕ್ತರು ನಿರಂತರ ಗ್ರಾಮದ ಅಭಿವೃದ್ಧಿಯ ಚಿಂತನೆಯಲ್ಲಿ ತೊಡಗಬೇಕು. ತಾವು ಅಭಿವೃದ್ಧಿ ಹೊಂದಬೇಕೆಂಬುದೇ ಧ್ಯೇಯವಾಗಿದೆ. ಗ್ರಾಮ ಸಮೃದ್ಧಿಯ ಹೆಸರಿನಲ್ಲಿ ಗ್ರಾಮದ 36 ಶ್ರದ್ಧಾ ಕೇಂದ್ರಗಳಲ್ಲಿಯೂ ನಿತ್ಯ ಆಚರಣೆಗಳಿಗೆಗೆ ಯಾವುದೇ ತೊಂದರೆ ಬಾರದಂತೆ ದೇವಾಲಯ ಆಧಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮದೊಳಗೆ ಹಡೀಲು ಬಿದ್ದ ಕೃಷಿ ಭೂಮಿಯನ್ನು ಗ್ರಾಮದ ಸಮಸ್ತರೂ ಸೇರಿ ಪುನಶ್ಚೇನಗೊಳಿಸುವ ನಿಟ್ಟಿನಲ್ಲೂ ಕಾರ್ಯಕ್ರಮ ಇಡಲಾಗಿದೆ. ದೇಗುಲ ಬ್ರಹ್ಮಕಲಶದೊಂದಿಗೆ ಗ್ರಾಮ ವಿಕಾಸ ಒಂದೇ ಪಥದಲ್ಲಿ ಸಾಗಬೇಕೆಂಬುದೇ ನಮ್ಮ ಆಶಯ
ಕೆ. ಟಿ. ವೆಂಕಟೇಶ್ವರ ನೂಜಿ
ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ