ಉಮೇಶ್ ಕತ್ತಿ ಸದ್ಯ ಕರ್ನಾಟಕ ಸರ್ಕಾರದಲ್ಲಿ ಆಹಾರ ಸಚಿವ, ಮೊದಲ ಎಂಟ್ರಿಯಲ್ಲೇ ಕೊಡೋದನ್ನ ಬಿಟ್ಟು ಕಿತ್ತುಕೊಳ್ಳೋದ್ರ ಬಗ್ಗೆ ಮಾತನಾಡಿ ಸದ್ಯ ವಿವಾದ ಸೃಷ್ಟಿಸಿರುವ ಸಚಿವರು 2018ರ ಚುನಾವಣೆ ವೇಳೆ ಘೋಷಿಸಿಕೊಂಡಿದ್ದು ಬರೋಬ್ಬರಿ 27 ಕೋಟಿ ರೂ. ಮೌಲ್ಯದ ಆಸ್ತಿ. ಇದರಲ್ಲಿ 16 ಕಡೆ ಕೃಷಿ ಭೂಮಿ, 5 ಕಡೆ ಕೃಷಿಯೇತರ ಭೂಮಿ, 5 ಕಡೆ ರೆಸಿಡೆನ್ಸಿಯಲ್ ಕಟ್ಟಡಗಳು, ಪತ್ನಿಯ ಹೆಸರಲ್ಲೊಂದು ಕಮರ್ಷಿಯಲ್ ಕಾಂಪ್ಲೆಕ್ಸ್…ಎಲ್ಲಾ ಸೇರಿದ್ರೆ 27 ಕಡೆಯ ಮಣ್ಣಿನ ಮೌಲ್ಯವೇ 16 ಕೋಟಿ ಮೀರುತ್ತದೆ. ಇದರ ಜೊತೆ 18 ಬ್ಯಾಂಕ್ ಖಾತೆ ಸೇರಿ ಬೇರೆ ಬೇರೆ ಹಣಕಾಸು ಸಂಸ್ಥೆಗಳಲ್ಲಿ ಕೋಟ್ಯಾಂತರ ರೂ. ಡೆಪಾಸಿಟ್. ಇಷ್ಟೂ ಸಾಲದೆಂಬಂತೆ 14 ಶೇರ್, ಡಿಬೆಂಚರ್ಸ್, ಬಾಂಡ್ ಸೇರಿ ಕೋಟಿ ಕೋಟಿ ಹೂಡಿಕೆ. ಇನ್ನು 2013ರ ಚುನಾವಣೆ ವೇಳೆ ಉಮೇಶ್ ಕತ್ತಿಯವರು ಘೋಷಿಸಿಕೊಂಡ ಆಸ್ತಿ ಮೌಲ್ಯ 14 ಕೋಟಿ. ಅಂದರೆ ಕೇವಲ 5 ವರ್ಷಗಳ ಅವಧಿಯಲ್ಲಿ ಏರಿಕೆ ಕಂಡಿದ್ದು ಬರೋಬ್ಬರಿ 13 ಕೋಟಿ ರೂ. ಮೌಲ್ಯದ ಆಸ್ತಿ. ಇದರಲ್ಲಿ ಭೂಮಿ ಮತ್ತು ಕಟ್ಟಡಗಳ ಮೌಲ್ಯ ಸುಮಾರು 7 ಕೋಟಿಯಷ್ಟಿದ್ರೆ ಐದೇ ವರ್ಷದಲ್ಲಿ 9 ಕೋಟಿ ಏರಿಕೆ ಕಂಡಿದೆ. ಇನ್ನೂ ಅಚ್ಚರಿ ಅಂದ್ರೆ 2008ರ ಚುನಾವಣೆ ವೇಳೆ ಇದೇ ಉಮೇಶ್ ಕತ್ತಿ ಘೋಷಿಸಿಕೊಂಡ ಆಸ್ತಿ 2 ಕೋಟಿ ಮೌಲ್ಯದ್ದು. ಅಂದ್ರೆ 2008 ರಿಂದ 2013ರ ಅವಧಿಯಲ್ಲಿ ಏರಿಕೆಯಾಗಿದ್ದು ಬರೋಬ್ಬರಿ 12 ಕೋಟಿ ಮೌಲ್ಯದ ಆಸ್ತಿ. ಅಂದ್ರೆ 2008ರಲ್ಲಿ 2 ಕೋಟಿ ಇದ್ದ ಆಸ್ತಿ ಸದ್ಯ 27 ಕೋಟಿ ದಾಟಿದೆ. ಅಲ್ಲಿಗೆ ಹತ್ತು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 25 ಕೋಟಿ ಏರಿಕೆ. ಇರಲಿ ಬಿಡಿ, ಆಸ್ತಿ ಪ್ರಮಾಣದ ಏರಿಕೆ ವಿಚಾರದಲ್ಲಿ ಅವರಿಗೆ ಅವರದ್ದೇ ಆದ ಆದಾಯದ ಮೂಲಗಳು ಇದ್ದರೂ ಇರಬಹುದು ಅನ್ನೋಣ. ಆದ್ರೆ ಇದಿಷ್ಟು ಕಾಲಕಾಲಕ್ಕೆ ಉಮೇಶ್ ಕತ್ತಿಯವರೇ ಚುನಾವಣಾ ಅಫಿಡವಿಟ್ ನಲ್ಲಿ ಘೋಷಿಸಿಕೊಂಡ ಆಸ್ತಿ ವಿವರ. ಹೀಗಾಗಿ ಇಂಥವರಿಗೆ ಸಚಿವ ಸ್ಥಾನ ಕೊಡೋದ್ರ ವಿಚಾರದಲ್ಲೂ ಮಾನದಂಡಗಳು ಜಾರಿಯಾದ್ರೆ ಚೆಂದ. ವರ್ಷ ವರ್ಷ ಆಸ್ತಿ ಮೌಲ್ಯ ಏರಿಕೆಯ ಆಧಾರದ ಮೇಲೆ ಸಚಿವ ಸ್ಥಾನಗಳನ್ನು ನಿರ್ಧರಿಸಿದರೆ ಉತ್ತಮ ಅನಿಸುತ್ತದೆ.


ಟಿವಿ, ಫ್ರಿಡ್ಜ್, ಬೈಕ್ ಗಳನ್ನು ಬಿಪಿಎಲ್ ಕಾರ್ಡ್ ರದ್ದತಿಗೆ ಮಾನದಂತ ಅಂತ ಹೇಳುವ ಮಾನ್ಯ ಸಚಿವರಿಗೂ ಆಸ್ತಿಯ ಆಧಾರದಲ್ಲಿ ಸಚಿವ ಸ್ಥಾನ ರದ್ದತಿಗೊಂದು ಮಾನದಂಡ ರೂಪುಗೊಳ್ಳಲಿ. ಪ್ರಧಾನಿಯವರ ಕಲ್ಪನೆಯಲ್ಲಿ ಡಿಜಿಟಲ್ ಇಂಡಿಯಾ ರೂಪುಗೊಳ್ತಾ ಇದ್ದರೆ ಇತ್ತ ಸಚಿವರು ಮಾತ್ರ ಟಿವಿಯ ಆಧಾರದಲ್ಲಿ ಬಡತನದ ಅಳತೆಗೆ ಇಳಿದಿದ್ದಾರೆ. ಇಂದು ಮನೋರಂಜನೆ ಮತ್ತು ಸುದ್ದಿ ತಿಳಿದುಕೊಳ್ಳುವ ಕಾರಣಕ್ಕೆ ಪ್ರತೀ ಮನೆಗೂ ಟಿವಿಗಳು ಬಂದಿವೆ. ಇಎಂಐ ಆಧಾರದಲ್ಲಿ ಟಿವಿ, ಫ್ರಿಡ್ಜ್, ಬೈಕ್ ಗಳನ್ನು ಸಾಮಾನ್ಯ ಬಡವನೂ ಕೊಂಡುಕೊಳ್ಳುವ ಮೂಲಕ ದುಡಿದ ಚಿಲ್ಲರೆ ದುಡ್ಡಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾನೆ. ಅಂದ ಮಾತ್ರಕ್ಕೆ ಇಂಥವರು ಕೋಟಿಯೋ ಲಕ್ಷವೋ ಬ್ಯಾಂಕ್ ಡೆಪಾಸಿಟ್ ಇಟ್ಟು ಟಿವಿ, ಫ್ರಿಡ್ಜ್, ಬೈಕ್ ಖರೀದಿಸ್ತಾರೆ ಅನ್ನೋದು ಮೂರ್ಖತನ. ಅದಕ್ಕೂ ಹೆಚ್ಚಾಗಿ ಒಬ್ಬ ಬಡವನನ್ನ ಟಿವಿ ಕೂಡ ಇಟ್ಟುಕೊಳ್ಳಬೇಡ ಅನ್ನೋವಷ್ಟರ ಮಟ್ಟಿಗೆ ಮತ್ತೆ ಮತ್ತೆ ಬಡತನದ ಕೂಪಕ್ಕೆ ತಳ್ಳುವ ಅವಿವೇಕಿತನದಂತೆ ತೋರುತ್ತಿದೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೂ ಬಿಪಿಎಲ್ ಕಾರ್ಡ್ ಆಧಾರದಲ್ಲಿ ಬಡತನ ಆಳೆಯುವ ಸರ್ಕಾರ ಮತ್ತೆ ಬಿಪಿಎಲ್ ರದ್ದು ಮಾಡೋದು ನಾಚಿಕೆಗೇಡಿನ ವಿಚಾರ. ಟಿವಿ, ಫ್ರಿಡ್ಜ್, ಬೈಕ್ ಇದ್ದವನಿಗೆ ರೋಗವೇ ಬರಲ್ವಾ? ಈ ವಸ್ತುಗಳನ್ನೆಲ್ಲ ಇನ್ ಸ್ಟಾಲ್ ಮೆಂಟ್ ನಲ್ಲಿ ಕೊಂಡುಕೊಂಡವನು ರೋಗ ಬಂದು ಆಸ್ಪತ್ರೆ ಸೇರಿದ್ರೆ ಆಸ್ಪತ್ರೆ ಬಿಲ್ ಗೆ ಇಎಂಐ ಕಲ್ಪಿಸೋ ತಾಕತ್ತು ಸರ್ಕಾರಕ್ಕೆ ಇದ್ಯಾ?…ಇದ್ಯಾವುದೂ ಇರದೇ ಇರುವಾಗ ಇಂದು ಬಿಪಿಎಲ್ ಕಾರ್ಡ್ ಆಧಾರದಲ್ಲಿ ಅದೆಷ್ಟೋ ಜನ ಉಚಿತ ಚಿಕಿತ್ಸೆ ಪಡೀತಾ ಇದಾರೆ. ಇಂಥ ದರಿದ್ರ ಕಾನೂನುಗಳನ್ನು ರೂಪಿಸಿ ಅಂಥವರ ಸಾವಿಗೆ ಕಾರಣವಾಗಬೇಡಿ. ಪ್ರತೀ ವರ್ಷ ಆಸ್ತಿ ಏರಿಸಿಕೊಳ್ಳೋ ರಾಜಕಾರಣಿಗಳಿಗೆ ತಳಮಟ್ಟದ ಜನರ ಬದುಕು ಅರ್ಥವಾಗಲ್ಲ ಬಿಡಿ. ಜೊತೆಗೆ ಕಚೇರಿಯಲ್ಲೇ ಕೂತು ಪುಕ್ಕಟೆ ನಿಯಮಗಳನ್ನು ರೂಪಿಸುವ ಐಎಎಸ್ ಗಳಿಗೂ ಜನರ ಬಡತನ ಅಳತೆ ಮಾಡೋ ಸಾಮಾನ್ಯ ಜ್ಞಾನ ಇಲ್ಲದೇ ಇರೋದು ದುರಂತ…ಇನ್ನು ಸಚಿವರೊಬ್ಬರ ಆಸ್ತಿಯೇ ಈ ಮಟ್ಟಿಗೆ ಏರಿಕೆ ಕಾಣುತ್ತಿರುವಾಗ ಸಾಮಾನ್ಯ ಬಡವನೊಬ್ಬ ಟಿವಿ, ಬೈಕ್ ಕೊಂಡುಕೊಳ್ಳೋದು ಯಾವ ಶ್ರೀಮಂತಿಕೆ ಸ್ವಾಮಿ?
ಭರತ್ ರಾಜ್












