ಬಂಟ್ವಾಳ, ಎ. ೩೦: ಬಂಟ್ವಾಳ ತಾಲೂಕಿನಾದ್ಯಂತ ವರದಿಯಾಗಿರುವ ದನ ಕಳವು ಪ್ರಕರಣಗಳನ್ನು ಭೇದಿಸಿದ ಬಂಟ್ವಾಳ ಪೊಲೀಸರು ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಿವಾಸಿಗಳಾದ ಇಮ್ರಾನ್ ಯಾನೆ ಕುಟ್ಟ ಇಮ್ರಾನ್ (೩೧),
ಜೈನುದ್ದೀನ್ (೨೨), ಹಿದಾಯುತುಲ್ಲಾ (೨೪), ಫಾರೂಕ್ ಯಾನೆ ಮಲಿಕ್ (೨೯) ಬಂಧಿತ ಆರೋಪಿಗಳು.
ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ ಮಾರುತಿ ರಿಡ್ಜ್ ಕಾರು, ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿದಂತಹ ೪ ದನಗಳು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಅಮೆಮಾರ್ ಮತ್ತು ಕುಂಪನಮಜಲು ಪ್ರದೇಶಕ್ಕೆ ಸೇರಿದ್ದು, ಇವರ ಮೇಲೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ವಿಟ್ಲ, ಪೂಂಜಾಲಕಟ್ಟೆ, ವಾಮಂಜೂರು, ಕಾವೂರು, ಕೋಣಾಜೆ, ಉಳ್ಳಾಲ, ಸೋಮವಾರ ಪೇಟೆ, ಕುಶಾಲನಗರ, ಸಕಲೇಶಪುರ, ಬಜಪೆ, ಮಡಿಕೇರಿ, ಶನಿವಾರ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳವು, ಹಲ್ಲೆ, ದೊಂಬಿ, ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀದರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ ಗೌಡ, ಎಸ್ಸೈ ಪ್ರಸನ್ನ, ಪಿಎಸ್ಸೈಗಳಾದ ವಿನೋದ್, ಜಂಬುರಾಜ್ ಮಹಾಜನ್, ಹೆಡ್ಕಾನ್ ಸ್ಟೆಬಲ್ಗಳಾದ ಸುರೇಶ್, ಜನಾರ್ದನ, ಮಾದವ ಗೌಡ, ರಾಧಾಕೃಷ್ಣ, ಪಿಸಿಗಳಾದ ನಝೀರ್, ಮನೋಜ್, ಸುಬ್ರಹ್ಮಣ್ಯ, ವಿಶಾಲಾಕ್ಷಿ ಅವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ.