ಬಂಟ್ವಾಳ: ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮ ದೇವತೆಯಾಗಿ ಗುರುತಿಸಿಕೊಂಡಿರುವ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇದೇ 14ರಿಂದ 19ರತನಕ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಮಹಾ ರಥೋತ್ಸವ ಕಾರ್ಯಕ್ರಮವು ನಡ್ವಂತಾಡಿ ಉದಯ ಪಾಂಗಣ್ಣಾಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಇದೇ 14ರಂದು ಬೆಳಿಗ್ಗೆ ಗಂಟೆ 8.45ಕ್ಕೆ ಕುಂಟ ಮುಹೂರ್ತ ನಡೆದು ಸಂಜೆ ಗಂಟೆ 5.30ಕ್ಕೆ ಧೂಮಾವತಿ ದೈವದ ಭಂಡಾರ ಬಂದು ಬಳಿಕ ಧ್ವಜಾರೋಹಣ ಉತ್ಸವ ನಡೆಯಲಿದೆ.
ಇದೇ 15ರಂದು ರಾತ್ರಿ ದೀಪದಬಲಿ ಉತ್ಸವ, ರಾತ್ರಿ 9.30 ಗಂಟೆಗೆ ಕಟೀಲು ಮೇಳದವರಿಂದ ‘ಪಂಚ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಇದೇ 16ರಂದು ನಡುಬಲಿ ಉತ್ಸವ, ಚಂದ್ರಮಂಡಲೋತ್ಸವ ಹಾಗೂ ರಾತ್ರಿ 9ಗಂಟೆಗೆ ಕೊಯಿಲ ವೈಷ್ಣವಿ ಕಲಾವಿದರಿಂದ ‘ಕುಸಲ್ದ ಗೌಜಿ’ ಕಾರ್ಯಕ್ರಮ ನಡೆಯಲಿದೆ.
ಇದೇ 17ರಂದು ರಾತ್ರಿ 7ಗಂಟೆಗೆ ‘ಮಹಾ ರಥೋತ್ಸವ’ ಹಾಗೂ ರಾತ್ರಿ 9.30 ಗಂಟೆಗೆ ಮಂಗಳೂರು ಓಂಕಾರ್ ಕ್ರಿಯೇಶನ್ ಮತ್ತು ಕಲಾ ಸಂಗಮ ಕಲಾವಿದರಿಂದ ‘ದೇಶ ಕರೆದಾಗ’ ನಾಟಕ ಪ್ರದರ್ಶನಗೊಳ್ಳಲಿದೆ.
ಇದೇ 18ರಂದು ಬೆಳಿಗ್ಗೆ ಚಂಡಿಕಾಯಾಗ, ಬೆಳಿಗ್ಗೆ 9ಗಂಟೆಗೆ ತುಲಾಭಾರ ಸೇವೆ, 10.30 ಗಂಟೆಗೆ ಕಲ್ಲೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಧೂಮಾವತಿ ದೈವದ ನೇಮೋತ್ಸವ, ರಾತ್ರಿ 9 ಗಂಟೆಗೆ ಸುಂಕದಕಟ್ಟೆ ತಂಡದಿಂದ ‘ಆಯೆ ಬರೆತಿನ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

