ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಸುಮಾರು 40 ವರ್ಷಗಳಷ್ಟು ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡು 10 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆಗೈದ ಎಂ. ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಶಾಲಾಭಿವೃದ್ದಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ರವರು ಸನ್ಮಾನಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಭಾರತ ಸೇವಾಶ್ರಮ ಕನ್ಯಾನ ಇದರ ಕಾರ್ಯದರ್ಶಿ ಯಸ್. ಈಶ್ವರ ಭಟ್ರವರು ಯಾವುದೇ ಪ್ರಶಸ್ತಿಗಿಂತಲೂ ಶಿಷ್ಯ ವೃಂದ ಗುರುಗಳ ಮೇಲೆ ಇಟ್ಟ ಪ್ರೀತಿಯೇ ಶ್ರೇಷ್ಠ ಪ್ರಶಸ್ತಿ ಎಂದರು.
ಸಭೆಯಲ್ಲಿ ಕಾನ ಈಶ್ವರ ಭಟ್ ಹಾಗೂ ವಿಟ್ಲ ವಲಯದ ಶಿಕ್ಷಣ ಸಂಯೋಜಕಿಯಾದ ಪುಷ್ಪಾ ಭಾಗವಹಿಸಿದ್ದರು. ಶಿಕ್ಷಕರಾದ ವೇಣುಗೋಪಾಲ ಶೆಟ್ಟಿಯವರು ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್. ಜನಾರ್ದನ ನಾಯಕ್ ಸನ್ಮಾನ ಪತ್ರ ವಾಚಿಸಿದರು. ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್, ಕಾರ್ಯದರ್ಶಿಗಳಾದ ಎಸ್. ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕರಾದ ಯಂ. ರುಕ್ಮಯ್ಯ ಗೌಡ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಈಶ್ವರ ನಾಯ್ಕ್ ಎಸ್. ರವರು ಶಾಲಾ ವರದಿ ವಾಚಿಸಿ, ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ. ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಭೋಜನದ ಬಳಿಕ ಗೋಪಾಲಕೃಷ್ಣ ಭಟ್ ನಿರ್ದೇಶಿಸಿದ ಮಾಯಾವಿ ಇಂದ್ರಾರಿ ಎಂಬ ಯಕ್ಷಗಾನ ಮಕ್ಕಳಿಂದ ಪ್ರದರ್ಶಿಸಲ್ಪಟ್ಟಿತು.
