Sunday, July 13, 2025

ಮಕ್ಕಳ ಕಲಿಕೆಯ ಆಶಾಕಿರಣ ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ

⚪ಪ್ರಸಕ್ತ ಸಾಲಿನಲ್ಲಿ ದ್ವಿತೀಯ PUCಯಲ್ಲಿ 95% ಫಲಿತಾಂಶ
⚪SSLCಯಲ್ಲಿ ಜನತಾ ಆಂಗ್ಲಮಾಧ್ಯಮ 85.71%, ಕನ್ನಡ ಮಾಧ್ಯಮ 83.33% ಫಲಿತಾಂಶ
⚪ಅತೀ ಹೆಚ್ಚು ಡಿಸ್ಟಿಂಕ್ಷನ್, ಪ್ರಥಮ ಶ್ರೇಣಿ ಪಡೆದ ವಿದ್ಯಾರ್ಥಿಗಳು
⚪ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ
ಅಡ್ಯನಡ್ಕದ ಜನತಾ ಕನ್ನಡ ಮಾಧ್ಯಮ ಮತ್ತು ಜನತಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳು, ಜನತಾ ಕನ್ನಡ ಮಾಧ್ಯಮ ಮತ್ತು ಜನತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳು
ಅಲ್ಲದೆ ಜನತಾ ಪದವಿಪೂರ್ವ ಕಾಲೇಜು ಯಶಸ್ಸಿನ ಪಯಣದಲ್ಲಿ ಮುಂಚೂಣಿಯಲ್ಲಿವೆ.

 


ಒಂದೇ ಕ್ಯಾಂಪಸ್‌ನಲ್ಲಿ ಎಲ್‌‌ಕೆಜಿ ತರಗತಿಯಿಂದ ತೊಡಗಿ ಜೂನಿಯರ್ ಕಾಲೇಜಿನ ತನಕ, ಅದೂ ತಮಗಿಷ್ಟವಾದ ಮಾಧ್ಯಮ ಮತ್ತು ವಿಷಯದ ಆಯ್ಕೆಗೆ ಅವಕಾಶವಿತ್ತು ಸನಿಹದ ಎಲ್ಲ
ವಿದ್ಯಾರ್ಥಿಗಳಿಗೂ ಪ್ರಾಶಸ್ತ್ಯವಿತ್ತು ಗುಣಮಟ್ಟದ ಶಿಕ್ಷಣ ನೀಡುವುದು ಒಂದು ಸಾಹಸ ಮತ್ತು ಸಾಮರ್ಥ್ಯದ ದ್ಯೋತಕ. ಇದಕ್ಕೆ ಬೆಂಬಲ ಮತ್ತು ಬೆನ್ನೆಲುಬಾಗಿ ಸಂಸ್ಥೆಗಳ ಆಡಳಿತ ಮಂಡಳಿ,
ಸಂಚಾಲಕರು, ಆಡಳಿತಾಧಿಕಾರಿಗಳು, ಮುಖ್ಯಸ್ಥರು, ನುರಿತ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು, ಮಕ್ಕಳು ಮತ್ತು ಹಿರಿಯ ವಿದ್ಯಾರ್ಥಿ ಸಂಘದವರು ಸಾಥ್
ನೀಡುತ್ತಿದ್ದಾರೆ. ಇಂದು ಇಲ್ಲಿನ ಹಿರಿಯ-ಕಿರಿಯ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದಾರೆ. ಇಲ್ಲಿ ಎಸ್ಸೆಸ್ಸೆಲ್ಸಿ ಮತ್ತು
ಪದವಿಪೂರ್ವ ತರಗತಿಗಳಲ್ಲಿ ಗರಿಷ್ಠ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತೇರ್ಗಡೆಯಾಗುವುದು ಸರ್ವೇಸಾಮಾನ್ಯ. ಅದರಲ್ಲೂ 2017-18ರಲ್ಲಿ ಹೊರಬಂದ ಇಲ್ಲಿನ ಮೊದಲ ಆಂಗ್ಲ
ಮಾಧ್ಯಮ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ವಿದ್ಯಾರ್ಥಿಗಳು 100% ಫಲಿತಾಂಶ ಪಡೆದಿರುವುದು ಉಲ್ಲೇಖನೀಯವಾಗಿದೆ. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 95% ಫಲಿತಾಂಶ
ಬಂದಿದ್ದು, ಒಟ್ಟು 22 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಜನತಾ ಆಂಗ್ಲಮಾಧ್ಯಮ 85.71% ಹಾಗೂ ಕನ್ನಡ ಮಾಧ್ಯಮದಲ್ಲಿ 83.33%
ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲಮಾಧ್ಯಮದಲ್ಲಿ 1 ಡಿಸ್ಟಿಂಕ್ಷನ್, 5 ಪ್ರಥಮ ಶ್ರೇಣಿ ಹಾಗೂ ಕನ್ನಡ ಮಾಧ್ಯಮದಲ್ಲಿ 4 ಡಿಸ್ಟಿಂಕ್ಷನ್ ಮತ್ತು 19 ಪ್ರಥಮ ಶ್ರೇಣಿ ಬಂದಿದೆ.
ವಿಶೇಷವೆಂದರೆ ಇಲ್ಲಿ ವಿದ್ಯಾರ್ಥಿಗಳನ್ನು ಸಂಸ್ಥೆಗೆ ದಾಖಲಿಸಿಕೊಳ್ಳುವಾಗ ಅವರಿಗೆ ಯಾವುದೇ ಪ್ರವೇಶ ಪರೀಕ್ಷೆ ನಡೆಸಿ ಅಳೆದು-ತೂಗಿ ನೋಡುವ ಪದ್ಧತಿಯಿಲ್ಲ. ಹೊರೆಯಾಗಬಲ್ಲಷ್ಟು
ಡೊನೇಶನ್ ಮತ್ತು ಶಾಲಾ ಶುಲ್ಕದ ಹಾವಳಿಯಿಲ್ಲ. ಹೀಗಿದ್ದರೂ ಸಂಸ್ಥೆಯು ಫಲಿತಾಂಶದಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲದೆ ಮಕ್ಕಳ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆಯಾಗುವಂತೆ
ಅವರನ್ನು ಭವಿಷ್ಯದ ಸಭ್ಯ ನಾಗರಿಕರನ್ನಾಗಿ ತಯಾರುಗೊಳಿಸುವ, ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಿ ಬೆಳೆಸುವ ಕೆಲಸ ಅದ್ವಿತೀಯವಾಗಿ ನಡೆಯುತ್ತಿದೆ.
ಅಂಕಗಳಿಕೆಯೊಂದಿಗೆ ವಿದ್ಯಾರ್ಥಿಯ ಸಾಮಾಜೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸಾಹಿತ್ಯ ಸಂಘ, ಇಕೋ ಕ್ಲಬ್, ಕ್ರೀಡಾ ಸಂಘ, ವಿಜ್ಞಾನ ಸಂಘ, ಸ್ವಯಂಸೇವಾ ದಳ ಹೀಗೆ
ಮಕ್ಕಳನ್ನು ಹಲವಾರು ಸಂಘಗಳಲ್ಲಿ ತೊಡಗಿಸಲಾಗುತ್ತಿದೆ. ವರ್ಷದುದ್ದಕ್ಕೂ ಹಲವಾರು ಶಾಲಾ ಹಬ್ಬಗಳು, ದಿನಾಚರಣೆಗಳು, ಪ್ರವಾಸ, ವಾರ್ಷಿಕೋತ್ಸವ, ಸಾಂಸ್ಕೃತಿಕ ಮತ್ತು
ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ಇದರಿಂದಾಗಿ ನಿಜಕ್ಕೂ ಮಕ್ಕಳಲ್ಲಿ ಶಿಸ್ತು, ಪ್ರಜ್ಞಾವಂತಿಕೆ ಅಲ್ಲದೆ ಕಲಿಕೆಯಲ್ಲಿ ತನ್ಮಯತೆ ಪ್ರಾಪ್ತವಾಗುತ್ತದೆ. ಸರಕಾರದ ಸ್ಕಾಲರ್‌ಶಿಪ್‌ಗಳಲ್ಲದೆ
ಸಂಸ್ಥೆಯಿಂದ ಕೊಡಮಾಡುವ ವಿಶೇಷ ವಿದ್ಯಾರ್ಥಿ ವೇತನಗಳು ಮತ್ತು ಪ್ರತಿಭಾ ಪುರಸ್ಕಾರಗಳು ಅನೇಕ ಇವೆ. ಸರಕಾರದಿಂದ ಮಕ್ಕಳಿಗೆ ದೊರೆಯುವ ಕ್ಷೀರಭಾಗ್ಯ ಮತ್ತು ಅಕ್ಷರದಾಸೋಹ
ಬಿಸಿಯೂಟ ಕಾರ್ಯಕ್ರಮದಂತೆ ಮಕ್ಕಳಿಗೆ ಆಡಳಿತ ಮಂಡಳಿ ಕೂಡಾ ಆಹಾರದ ವ್ಯವಸ್ಥೆ ಮಾಡಿದೆ. ವಿಶೇಷ ಕೋಚಿಂಗ್ ನೀಡಿ ಮಕ್ಕಳನ್ನು ಪರೀಕ್ಷೆಗಳಿಗೆ ತಯಾರು ಮಾಡುವ ತಜ್ಞ ಮತ್ತು
ನುರಿತ ಅಧ್ಯಾಪಕರ ಒಂದು ತಂಡವೇ ಇಲ್ಲಿ ಕಾಯಕನಿಷ್ಠವಾಗಿ ತೊಡಗಿಕೊಂಡಿದೆ.
ಸುವಿಶಾಲವಾದ ಕ್ರೀಡಾಂಗಣ, ಚೆಲುವಿನ ಶಾಲೆಯ ಆವರಣ, ಶಾಲಾ ಕೈತೋಟ, ಸುಸಜ್ಜಿತ ಗ್ರಂಥಾಲಯ ಮತ್ತು ವಿಜ್ಞಾನ ಪ್ರಯೋಗಾಲಯ, ಸುಭದ್ರ ಮತ್ತು ವಿನೂತನ ಶಾಲಾ ಕಟ್ಟಡಗಳು
ಈ ಸಂಸ್ಥೆಯ ಭೌತಿಕ ಸಂಪನ್ಮೂಲವನ್ನು ಸೊಬಗಿನಿಂದ ಕಂಗೊಳಿಸುವಂತೆ ಮಾಡಿವೆ. ದಿವಂಗತ ವಾರಣಾಶಿ ಸುಬ್ರಾಯ ಭಟ್ ಹಾಗೂ ದಿವಂಗತ ಸಾಯ ಕೃಷ್ಣ ಭಟ್ ಈ ಸಂಸ್ಥೆಗಳ
ಸಂಸ್ಥಾಪಕರು. ಸನ್ಮಾನ್ಯ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿದ್ದು ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷರಾಗಿ ಸನ್ಮಾನ್ಯ ಶ್ರೀಯುತ
ಗೋವಿಂದ ಪ್ರಕಾಶ್ ಸಾಯ ಮತ್ತು ಆಡಳಿತಾಧಿಕಾರಿಯಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಸನ್ಮಾನ್ಯ ಶ್ರೀಯುತ ರಮೇಶ ಎಂ. ಬಾಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ ನಗರದ ಅಬ್ಬರ ಮತ್ತು ಭರಾಟೆಯಿಂದ ಮುಕ್ತವಾಗಿರುವ ಗ್ರಾಮೀಣ ಪರಿಸರದಲ್ಲಿರುವ ಅಡ್ಯನಡ್ಕದ ಜನತಾ ವಿದ್ಯಾಸಂಸ್ಥೆಗಳು ಮಕ್ಕಳ ವಿದ್ಯಾರ್ಜನೆಗೆ ಹೇಳಿ ಮಾಡಿಸಿದಂತಿವೆ.

More from the blog

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...