ಅಡ್ಯನಡ್ಕ: ಭಜನೆ ಎಂಬುದು ಭಕ್ತ ಮತ್ತು ಭಗವಂತನ ಸೇತುವೆಯಾಗಿದೆ ನಮಗೆ ಜೀವನ ಮಾರ್ಗವನ್ನು ತೋರಿಸಿಕೊಡುವ ಭಜನೆ ಹಾಗೂ ಭಜನಾ ಮಂದಿರಗಳು ಭಾರತೀಯ ಸಂಸ್ಕೃತಿ ಜೀವಾಳಗಳು ಎಂದು ಅಡ್ಯನಡ್ಕ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿಶ್ವೇಶ್ವರ ವಿ.ಕೆ ಹೇಳಿದರು.
ಅವರು ಅಮೈ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಯ ೪೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ನೀಡಿದ ಭಜರಂಗದಳ ಪ್ರಾಂತ ಸಂಚಾಲಕರಾದ ಮುರಳೀಕೃಷ್ಣ ಹಸಂತ್ತಡ್ಕ ಇವರು ಮಾತನಾಡಿ ಬದಲಾಗುತ್ತಿರುವ ದೇಶದಲ್ಲಿ ನಾವೆಲ್ಲರೂ ನಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಯ ಭಾಗವಾಗಬೇಕಿದೆ ಎಂದು ಹೇಳಿದರು.
ಗ್ಯಾರೇಜ್ ಮಾಲಕರ ಸಂಘ(ರಿ) ವಿಟ್ಲ ವಲಯ ಇದರ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಆರ್.ಎಸ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು, ವೇದಿಕೆಯಲ್ಲಿ ಮಂಡಳಿಯ ಅಧ್ಯಕ್ಷರಾದ ನಾರಾಯಣ ಕುಲಾಲ್ ಎ. ಉಪಸ್ಥಿತರಿದ್ದರು.
ಕು.ಮಾನ್ವಿ, ಕು.ಮೇಘ, ಶ್ರೀಲೇಖಾ ಪ್ರಾರ್ಥಿಸಿದರು. ಮಂಡಳಿಯ ಅಧ್ಯಕ್ಷರಾದ ನಾರಾಯಣ ಕುಲಾಲ್ ಸ್ವಾಗತಿಸಿದರು, ಕಾರ್ಯದರ್ಶಿ ಕೇಶವ ಕೋಪ್ರೆ ವರದಿ ವಾಚಿಸಿದರು, ಕೋಶಾಧಿಕಾರಿ ರಾಮ ಜಿ ವಂದಿಸಿದರು. ಶಿವಪ್ಪ ನಾಯ್ಕ ಶಾಂತಿಮೂಲೆ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವ ಪ್ರಯುಕ್ತ ಬೆಳಗ್ಗೆ ದೀಪ ಪ್ರತಿಷ್ಠೆ, ಗಣಪತಿ ಹವನ, ಶ್ರೀ ದುರ್ಗಾ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ವೇದಮೂರ್ತಿ ಶ್ರೀ ಕೃಷ್ಣ ಪ್ರಸಾದ್ ಭಟ್ ಅಮೈ ಅವರ ಮುಂದಾಳತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸ್ಥಳೀಯ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆದು ಗಿರೀಶ್ ರೈ ಕಕ್ಕೆಪದವು ಹಾಗೂ ಕಾವ್ಯಶ್ರೀ ಆಜೇರು ಇವರಿಂದ ಮನ ಸೂರೆಗೊಳ್ಳುವ ಗಾನ ವೈಭವ ಕಾರ್ಯಕ್ರಮ ನಡೆಯಿತು.


