ಪುತ್ತೂರು: ಇತ್ತೀಚಿನ ಒತ್ತಡದ ಬದುಕಿನಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ ಮಾನಸಿಕವಾದ ಸಮಸ್ಯೆಗಳಿಂದ ಬಳಲುತ್ತಾರೆ. ನಮ್ಮಲ್ಲಿ ಇರುವಂತಹ ಅಸಹನೆ ಮತ್ತು ಮಾನಸಿಕ ಒತ್ತಡ ಸಹಿಸಲು ಅಸಾಧ್ಯ ಎನಿಸಿದಾಗ ವ್ಯಕ್ತಿ ಹಿರಿಯನೇ ಆಗಿರಲಿ, ವಿದ್ಯಾರ್ಥಿಯೇ ಆಗಿರಲಿ ಆತ್ಮಹತ್ಯೆಯ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇಂದಿನ ನಾಗಲೋಟದ ಬದುಕಿನಲ್ಲಿ ಅನೇಕ ವಿಚಾರಗಳಿಂದ ಮಾನಸಿಕವಾಗಿ ದುರ್ಬಲರಾಗುವ ನಾವು ಜೀವನಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಾಗ ಯಾವುದೇ ರೀತಿಯಲ್ಲಿ ಮಾನಸಿಕವಾಗಿ ಕಂಗೆಡಲು ಸಾಧ್ಯ ಇಲ್ಲ ಎಂದು ಲಯನ್ಸ್ ಪಾಸ್ಟ್ ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್ ಎ. ಹೇಳಿದರು.


ಅವರು ನಿಮ್ಹಾನ್ಸ್ ಬೆಂಗಳೂರು, ಮನಶಾಂತಿ ಮಂಗಳೂರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮಂಗಳೂರು, ಸೂಸೈಡ್ ಲೈಫ್ಲೈನ್, ಸುಶೇಗ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಇಂಚರ ಫೌಂಡೇಶನ್ ಮಂಗಳೂರು, ಲಯನ್ಸ್ ಕ್ಲಬ್ ಸಂಪಾಜೆ, ವಿಟ್ಲ, ಪುತ್ತೂರು, ಪುತ್ತೂರ್ ದ ಮುತ್ತು ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು(ಸ್ವಾಯತ್ತ) ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕಾಲೇಜಿನಲ್ಲಿ ನಡೆದ ಸಹವರ್ತಿ ಪ್ರೇರಕ ಆತ್ಮಹತ್ಯೆ ತಡೆಯ ಬಗೆಗಿನ ಯುವ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರತಿಭೆಗಳನ್ನು ಹೊಂದಿರುತ್ತಾನೆ. ಆದರೆ ಘನತೆಯನ್ನು ಹೆಚ್ಚಿಸುವಲ್ಲಿ ವಿಫಲಗೊಂಡಾಗ ಒತ್ತಡದಿಂದ ಆತ್ಮಹತ್ಯೆಗೆ ಬಲಿಯಾಗುತ್ತಾನೆ ಎಂದು ನುಡಿದರು.
ಅನೇಕ ಜನರು ವಿಪರೀತ ಆಲೋಚನೆಗೆ ಒಳಗಾದಾಗ ಮತ್ತು ತೀವ್ರವಾಗಿ ನೊಂದುಕೊಂಡಾಗ ಆತ್ಮಹತ್ಯೆಗೆ ಬಲಿಯಾಗುತ್ತಾರೆ ಎಂದು ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ನ ಪ್ರಾಂತೀಯ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಸಚಿತ್ ರೈ ಹೇಳಿದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಪಾಜೆ ಎಲ್ ಸಿ ಅಧ್ಯಕ್ಷ ಶ್ರೀಮತಿ ನಳಿನಿ ಕಿಶೋರ್, ಪುತ್ತೂರು ಎಲ್ ಸಿ ಅಧ್ಯಕ್ಷ ಶ್ರೀ ಕೇಶವ ನಾಯ್ಕ್, ಪುತ್ತೂರ್ ದ ಮುತ್ತು ಎಲ್ ಸಿ ಅಧ್ಯಕ್ಷ ಶ್ರೀ ಕೇಶವ ಪೂಜಾರಿ ಬೆದ್ರಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜು, ವಿಟ್ಲ ಮತ್ತು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ರಮೀಲಾ ಶೇಖರ್ ಸ್ವಾಗತಿಸಿದರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಯೋಗೇಶ್ ಕುಮಾರ್ ವಂದಿಸಿ, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮತ್ತು ಆಪ್ತ ಸಮಾಲೋಚಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.












