ಬೆಂಗಳೂರು: ಎಲ್ಲ ಇಲಾಖೆಗಳ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ಗಣ್ಯರ ಜಯಂತಿಗಳಿಗೆ ನೀಡುತ್ತಿದ್ದ ರಜೆ ಹಾಗೂ ಸಾಂದರ್ಭಿಕ ರಜೆಗಳನ್ನು ಕಡಿತಗೊಳಿಸಿ ಎಲ್ಲ ಶನಿವಾರವೂ ರಜೆ ನೀಡುವಂತೆ ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ರಜೆ ಕಡಿತ ಮಾಡುವುದನ್ನು ಅನುಮೋದಿಸಿದ್ದ ಸಚಿವ ಸಂಪುಟ ಉಪ ಸಮಿತಿ, ಶನಿವಾರದ ರಜೆಯನ್ನು ನಾಲ್ಕನೇ ವಾರಕ್ಕೆ ಮಾತ್ರ ವಿಸ್ತರಿಸುವಂತೆ ಸಲಹೆ ನೀಡಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣ್ಯರ ಜಯಂತಿಗಳ ರಜೆಯನ್ನು ಕಡಿತ ಮಾಡದೇ ಇರುವ ತೀರ್ಮಾನ ಕೈಗೊಳ್ಳಲಾಗಿದೆ. ಸಾಂದರ್ಭಿಕ ರಜೆಗಳ ಸಂಖ್ಯೆಯನ್ನು 15ರಿಂದ 10 ಇಳಿಸುವುದು ಹಾಗೂ ನಾಲ್ಕನೇ ಶನಿವಾರ ರಜೆ ನೀಡುವುದನ್ನು ಮಾತ್ರ ಒಪ್ಪಿಕೊಳ್ಳಲಾಗಿದೆ.
‘ತಕ್ಷಣದಿಂದಲೇ ಈ ಆದೇಶ ಅನ್ವಯವಾಗಲಿದೆ. ಈ ಕುರಿತ ಆದೇಶಕ್ಕೆ ಮುಖ್ಯಮಂತ್ರಿಯವರ ಸಹಿ ಮಾತ್ರ ಬಾಕಿ ಉಳಿದಿರುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ‘ತಕ್ಷಣದಿಂದಲೇ ರಜೆ ಅನ್ವಯ ಆಗುತ್ತದೆಯೊ ಅಥವಾ ಮುಂದಿನ ವರ್ಷದಿಂದ ಅನ್ವಯ ಆಗುತ್ತದೆಯೊ ಎಂಬುದನ್ನು ಮುಖ್ಯಮಂತ್ರಿಯವರು ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.
‘ಆರನೇ ವೇತನ ಆಯೋಗದ ವರದಿಯ ಶಿಫಾರಸಿನಲ್ಲಿ ಪ್ರತಿ ಶನಿವಾರವೂ ರಜೆ ನೀಡಲು ತಿಳಿಸಿತ್ತು. ಅಂದರೆ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಬೇಕು ಎಂಬುದಾಗಿತ್ತು. ಅಷ್ಟು ರಜೆಗಳನ್ನು ನೀಡಲು ಸಾಧ್ಯವಿಲ್ಲದೇ ಇರು
ವುದರಿಂದ ಈ ತೀರ್ಮಾನ ಕೈಗೊಳ್ಳಲಾಯಿತು’ ಎಂದು ವಿವರಿಸಿದರು.
ಯಾವುದೇ ಜಯಂತಿ ಅಥವಾ ಹಬ್ಬಗಳ ರಜೆಯನ್ನು ಕಡಿತ ಮಾಡದಿರಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.
ಪೊಲೀಸ್ ಇಲಾಖೆಗೆ 4ನೇ ಶನಿವಾರದ ರಜೆ ಅನ್ವಯ ಆಗುವುದಿಲ್ಲ’ ಎಂದೂ ಅವರು ತಿಳಿಸಿದರು.