ಕಡಬ: ಓಮ್ನಿ ಹಾಗೂ ಕ್ರೆಟಾ ಕಾರು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಓಮ್ನಿಯಲ್ಲಿದ್ದ 8 ಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ನಡೆದಿದೆ.
ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ರವಿ ಅವರ ತಾಯಿ ಮಣಿಯಮ್ಮ, ಪತ್ನಿ ವಾಣಿ, ಪುತ್ರಿ ರಿಷಾ, ಪುತ್ರ ಶರಣ್, ಸಹೋದರ ಯೋಗೇಶ್, ಅವರ ಪತ್ನಿ ನೀತು, ಪುತ್ರಿ ನೇಹಾ, ಪುತ್ರ ಅಂಜನ್ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.