ಮಂಗಳೂರು: ಗಣರಾಜ್ಯೋತ್ಸವ ಮತ್ತು ಪ್ರಧಾನಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಮೂಡುಬಿದಿರೆಯ ಹತ್ತನೇ ತರಗತಿ ಬಾಲಕ ಪ್ರಹ್ಲಾದ ಮೂರ್ತಿ ಕಡಂದಲೆ ಆಯ್ಕೆಯಾಗಿದ್ದಾರೆ.
ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಹ್ಲಾದ ಮೂರ್ತಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಜನವರಿ 27ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಡಂದಲೆಯ ಸ್ಕಂದ ಪ್ರಸಾದ್ ಭಟ್- ರಾಜಲಕ್ಷ್ಮೀ ಎಂ.ಕೆ. ಅವರ ಪುತ್ರ ಪ್ರಹ್ಲಾದ ಮೂರ್ತಿ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಹ್ಲಾದ ಜನವರಿ ಮೊದಲ ವಾರ ನಡೆದ ರಾಷ್ಟ್ರ ಮಟ್ಟದ ಕಲಾ ಉತ್ಸವದ ನಾಟಕ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದರು.