ಮಂಗಳೂರು: ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ವಂಚನೆಗೊಳಗಾದ ಘಟನೆ ನಡೆದಿದೆ.

ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಮಾ.3ರಂದು ಮಂಗಳೂರಿಗೆ ಆಗಮಿಸಿದ್ದು, ನಂತರ ಮಂಗಳೂರು ಸುತ್ತಾಡಿದ ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ನಲ್ಲಿ ಹುಡುಕಾಡಿದ್ದಾರೆ. ಆದರೆ ಈ ವೇಳೆ ವಿಮಾನದ ಸೌಲಭ್ಯ ಇಲ್ಲದಿರುವುದನ್ನು ತಿಳಿದು, ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಸರ್ಚ್ ಮಾಡಿದ್ದಾರೆ. ಈ ವೇಳೆ, ಖಾಸಗಿ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ವೆಬ್ಸೈಟ್ ಒಂದು ಅವರಿಗೆ ಸಿಕ್ಕಿದೆ. ಬಳಿಕ ಆದನ್ನು ಸಂಪರ್ಕಿಸಿದಾಗ, ನಿತಿನ್ ಎನ್ನುವ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದಾನೆ.
ಆ ಬಳಿಕ ಹೆಲಿಕಾಪ್ಟರ್ ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳುಹಿಸಿದ್ದ ಕ್ಯೂಆರ್ ಕೋಡ್ಗೆ ಹಣ ನೀಡಿದ್ದಾರೆ. ಅನಂತರ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ ವೈಷ್ಣೋದೇವಿ ದೇವಸ್ಥಾನಕ್ಕೆ ಕರೆ ಮಾಡಿದಾಗ ತಮ್ಮಲ್ಲಿ ಅಂತಹ ಯಾರೇ ಪ್ರತಿನಿಧಿ ಇಲ್ಲವೆಂದು ಹೇಳಿದ್ದು, ಈ ವೇಳೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಅದರಂತೆ ಮಂಗಳೂರಿಗೆ ಬಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.